ಹುಬ್ಬಳ್ಳಿ: ಪ್ರಧಾನಿ ನರೇಂದ್ರ ಮೋದಿ ಅವರು ವಿರುದ್ಧ ವಾಗ್ಧಾಳಿ ನಡೆಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಪ್ರಧಾನಿ ಮೋದಿ ಅವರ 'ಮನ್ ಕಿ ಬಾತ್' ಪದವನ್ನು ಮಂಕಿ ಬಾತ್(‘Monkey Baat) ಎಂದು ಹೇಳಿ ಅಪಹಾಸ್ಯ ಮಾಡಿದ್ದಾರೆ.
ಮಂಕಿ ಬಾತ್ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ಜನರ ಹಾದಿ ತಪ್ಪಿಸುತ್ತಿದ್ದಾರೆ. ಅಚ್ಚೇ ದಿನ್ ಬಂದಿಲ್ಲ, ಕಚ್ಚೆ ದಿನ್ ಬಂದಿದೆ ಎಂದು ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ.
ಕಾಂಗ್ರೆಸ್ ಚುನಾವಣಾ ರ್ಯಾಲಿಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಜನತೆ ನಿರೀಕ್ಷೆಯನ್ನು ನಿಭಾಯಿಸುವಲ್ಲಿ ಮೋದಿ ವಿಫಲರಾಗಿದ್ದಾರೆ. ಪ್ರಾರಂಭಿಕ ದಿನಗಳಲ್ಲಿ ಪ್ರಧಾನಿ ಮೇಲೆ ಇಟ್ಟಿದ್ದ ಭರವಸೆಯನ್ನು ಜನರು ಕಳೆದುಕೊಳ್ಳುತ್ತಾ ಬರುತ್ತಿದ್ದಾರೆ ಎಂದು ಸಿಎಂ ಹೇಳಿದ್ದಾರೆ.
ಪೊರಕೆ ಹಿಡಿದು ಸ್ವಚ್ಚ ಭಾರತ ಎಂದು ಹೇಳಿದ ಮಾತ್ರಕ್ಕೆ ದೇಶ ಸ್ವಚ್ಛವಾಗುವುದಿಲ್ಲ. ಬಿಜೆಪಿ ನಾಯಕರ ಚಿಂತನೆ ಸ್ವಚ್ಛವಾಗಿಲ್ಲ. ಸಮಾಜವನ್ನು ಒಡೆಯಬೇಕು ಎಂದಿರುವ ಬಿಜೆಪಿ ನಾಯಕರಿಂದ ಸ್ವಚ್ಛತೆಯನ್ನು ಹೇಗೆ ನಿರೀಕ್ಷಿಸುವುದು ಎಂದು ಪ್ರಶ್ನಿಸಿದ್ದಾರೆ.
ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಮಾತ್ರ ಒಳ್ಳೆ ಕಾರ್ಯಗಳು ಆಗಿರುವುದು. ಸ್ಥಳೀಯ ಸಂಸ್ಥೆಗಳು ಅಭಿವೃದ್ಧಿ ಕಾಣುವಲ್ಲಿ ಕಾಂಗ್ರೆಸ್ ಮಹತ್ತರ ಪಾತ್ರವಹಿಸಿದೆ. ಅಲ್ಲದೇ, ಅನೇಕ ಮಂದಿಗೆ ಉದ್ಯೋಗವಕಾಶ ಕಲ್ಪಿಸಿ, ಸ್ವಾತಂತ್ರ್ಯ ನೀಡಿದೆ ಎಂದು ಅವರು ತಿಳಿಸಿದ್ದಾರೆ.