ಮೊಯ್ಲಿಯವರೇ ನಿಮಗೆಷ್ಟು ವಯಸ್ಸು: ಜನಾರ್ದನ ಪೂಜಾರಿ ತಿರುಗೇಟು

ಪಕ್ಷದ ಹಿರಿಯ ಮಾತಿಗೆ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ ಎಂದಿದ್ದ ಮಾಜಿ ಕೇಂದ್ರ ಸಚಿವ, ಹಿರಿಯ ಕಾಂಗ್ರೆಸ್ ನಾಯಕ ಎಂ.ವೀರಪ್ಪ ಮೊಯ್ಲಿ ಅವರಿಗೆ ತಿರುಗೇಟು...
ಜನಾರ್ದನ ಪೂಜಾರಿ
ಜನಾರ್ದನ ಪೂಜಾರಿ
ಮಂಗಳೂರು: ಪಕ್ಷದ ಹಿರಿಯ ಮಾತಿಗೆ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ ಎಂದಿದ್ದ ಮಾಜಿ ಕೇಂದ್ರ ಸಚಿವ, ಹಿರಿಯ ಕಾಂಗ್ರೆಸ್ ನಾಯಕ ಎಂ.ವೀರಪ್ಪ ಮೊಯ್ಲಿ ಅವರಿಗೆ ತಿರುಗೇಟು ನೀಡಿರುವ ಪಕ್ಷದ ಮತ್ತೊಬ್ಬ ಹಿರಿಯ ನಾಯಕ ಜನಾರ್ದನ ಪೂಜಾರಿ ಅವರು, ಮೊಯ್ಲಿಯವರೇ ನಿಮಗೆಷ್ಟು ವಯಸ್ಸು ಎಂದು ಪ್ರಶ್ನಿಸಿದ್ದಾರೆ.
ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಪೂಜಾರಿ, ವೀರಪ್ಪ ಮೊಯ್ಲಿ ಅವರ ವಯಸ್ಸು 21 ಅಲ್ಲ, 77 ವರ್ಷ. ವಯಸ್ಸಾದವರ ಮಾತಿಗೆ ಬೆಲೆ ಇಲ್ಲವೆಂದಾದರೆ ನೀವ್ಯಾಕೆ ಚುನಾವಣಾ ಪ್ರಚಾರಕ್ಕೆ ಹೋಗುತ್ತಿದ್ದೀರಿ? ಎಂದು ಪ್ರಶ್ನಿಸಿದರು.
‘ಜನಾರ್ದನ ಪೂಜಾರಿ ಹಾಗೂ ಎಸ್.ಎಂ.ಕೃಷ್ಣ ಅವರಿಗೆ ವಯಸ್ಸಿನ ದೋಷವಿದ್ದು, ಅವರ ಮಾತಿಗೆ ಹೆಚ್ಚು ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ’ ಎಂಬ ವೀರಪ್ಪ ಮೊಯ್ಲಿ ಹೇಳಿಕೆ ನೀಡಿದ್ದರು. ಇದಕ್ಕೆ ತಿರುಗೇಟು ನೀಡಿದ ಪೂಜಾರಿ, ನನ್ನ ಬಾಯಿಗೆ ಕೋಲು ಹಾಕಬೇಡಿ ಎಂದು ಹಿಂದೆಯೇ ಹೇಳಿದ್ದೆ. ನಿಮ್ಮ ಬಗ್ಗೆ ಹೇಳಲು ಸಾಕಷ್ಟಿದೆ. ಚುನಾವಣೆ ಮುಗಿದ ಮೇಲೆ ಎಲ್ಲವನ್ನೂ ಬಿಚ್ಚಿಡುತ್ತೇನೆ ಎಂದು ಎಚ್ಚರಿಸಿದರು. ನಾನಾಗಲೀ, ಎಸ್.ಎಂ.ಕೃಷ್ಣ ಹೇಳಿರುವುದರಲ್ಲಿ ತಪ್ಪೇನಿದೆ? ಮೊಯ್ಲಿ ಪಕ್ಷವನ್ನು ಮುಗಿಸಲು ಹೊರಟಿದ್ದಾರೆಯೇ ಎಂದು ಪ್ರಶ್ನಿಸಿದರು.
ಉಡುಗೋರೆಯಾಗಿ ಸಿಕ್ಕ ಕೈಗಡಿಯಾರವನ್ನು ಹರಾಜು ಹಾಕಿ, ಬರುವ ಹಣವನ್ನು ಸಮಾಜ ಕಾರ್ಯಕ್ಕೆ ಬಳಸಿ ಎಂದು ಮುಖ್ಯಮಂತ್ರಿಗಳಿಗೆ ಸಲಹೆ ನೀಡಿದ್ದೆ. ಇದರಲ್ಲಿ ತಪ್ಪೇನಿದೆ. ಮೊಯ್ಲಿಯವರೆ ತಪ್ಪು ಮಾಡದವರು ಯಾರೂ ಇಲ್ಲ. ಆದರೆ ಆ ತಪ್ಪನ್ನು ಸರಿಮಾಡಿಕೊಂಡು ಹೋಗುವುದು ದೊಡ್ಡ ಗುಣ. ಇದನ್ನು ಅರ್ಥ ಮಾಡಿಕೊಳ್ಳಿ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com