ಬೆಂಗಳೂರು: ಕೆಲವು ವಯಕ್ತಿಕ ಕಾರಣಗಳಿಂದಾಗಿ ಹೆಬ್ಬಾಳ ಉಪ ಚುನಾವಣೆಯಲ್ಲಿ ಸ್ಫರ್ಧಿಸುತ್ತಿಲ್ಲ, ಆದರೆ ಪಕ್ಷದ ಟಿಕೆಟ್ ಪಡೆಯುವ ಅಧಿಕೃತ ಅಭ್ಯರ್ಥಿಯನ್ನು ಗೆಲ್ಲಿಸಿಕೊಡುವುದು ನನ್ನ ಜವಾಬ್ದಾರಿ ಎನ್ನುವ ಮೂಲಕ ಮಾಜಿ ಸಚಿವ ಕಟ್ಟಾ ಸುಬ್ರಮಣ್ಯ ನಾಯ್ಡು ಚುನಾವಣಾ ಕಣದಿಂದ ಹಿಂದೆ ಸರಿದಿದ್ದಾರೆ.
ಹೆಬ್ಬಾಳ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಸಂಬಂಧ ಬುಧವಾರ ಬಿಜೆಪಿ ಶಾಸಕ ಮುನಿರಾಜು ಬಿಜೆಪಿ ನಗರಾಧ್ಯಕ್ಷ ಸುಬ್ಬ ನರಸಿಂಹ ಅವರು ಕಟ್ಟಾ ಸುಬ್ರಮಣ್ಯ ನಾಯ್ಡು ಅವರ ಮನೆಗೆ ತೆರಳಿ ಚರ್ಚಿಸಿದರು.
ಚರ್ಚೆಯ ಬಳಿಕ ಹೊರಗೆ ಬಂದ ಕಟ್ಟಾ ಸುಬ್ರಮಣ್ಯ ನಾಯ್ಡು ಅವರು ಮಾತನಾಡಿ ವೈಯಕ್ತಿಕ ಕಾರಣಗಳಿಂದಾಗಿ ಈ ಬಾರಿ ನಾನು ಹೆಬ್ಬಾಳ ಚುನಾವಣೆಯಲ್ಲಿ ಸ್ಪರ್ಧಿಸುತ್ತಿಲ್ಲ ಎಂದು, ಪಕ್ಷ ಯಾವುದೇ ಅಭ್ಯರ್ಥಿಗೆ ಟಿಕೆಟ್ ನೀಡಿದರೂ ಅವರ ಗೆಲುವಿಗೆ ಶ್ರಮಿಸುತ್ತೇನೆ. ಕಳೆದ ಬಾರಿ ಜಗದೀಶ್ ಕುಮಾರ್ ಗೆಲುವಿಗೆ ಯಾವ ರೀತಿ ಓಡಾಡಿದ್ದನೋ ಅದೇ ರೀತಿಯಲ್ಲಿ ಈ ಬಾರಿಯೂ ಕೆಲಸ ಮಾಡುತ್ತೇನೆ ಎಂದರು.
ಕೆಲವರು ಹೆಬ್ಬಾಳ ಕ್ಷೇತ್ರದಲ್ಲಿ ಗೆಲ್ಲುತ್ತೇನೆ ಎಂದು ಆರ್ಭಟಿಸುತ್ತಾರೆ. ತಮ್ಮಲ್ಲಿರುವ ಹಣ ಹಂಚಿ ಮತವನ್ನು ಕೊಂಡು ಕೊಳ್ಳಲು ಯತ್ನಿಸುತ್ತಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕೊಂಡುಕೊಳ್ಳುವ ಪ್ರವೃತ್ತಿ ಒಳ್ಳೆಯದಲ್ಲ. ಈ ಕೆಲಸವನ್ನು ಯಾವುದೇ ಪಕ್ಷದವರು ಮಾಡಬಾರದು. ನಾನು ಯಾರ ಹೆಸರನ್ನೂ ಹೇಳುವುದಿಲ್ಲ. ಅದು ಜನರಿಗೆ ಗೊತ್ತಿದೆ. ತಾವು ನಿಲ್ಲುವುದಿಲ್ಲ ಎಂದರೂ ಪಕ್ಷ ನನ್ನ ಮೇಲೆ ಇಟ್ಟಿರುವ ನಂಬಿಕೆ ವಿಶ್ವಾಸಕ್ಕೆ ಸದಾ ಚಿರರುಣಿಯಾಗಿರುತ್ತೇನೆ.
Advertisement