ಕೇಂದ್ರದಿಂದ ರು.30 ಸಾವಿರ ಕೋಟಿ ಅನುದಾನ: ಶೆಟ್ಟರ್

ಕೇಂದ್ರ ಸರ್ಕಾರದಿಂದ 2015-16 ನೇ ಸಾಲಿನ ಆರ್ಥಿಕ ವರ್ಷದಲ್ಲಿ ರಾಜ್ಯಕ್ಕೆ ಒಟ್ಟು ರು.30799.44 ಕೋಟಿ ಅನುದಾನ ಬಂದಿದ್ದು, ಈ ಬಗ್ಗೆ ಮಾತನಾಡದ ಮುಖ್ಯಮಂತ್ರಿ ...
ಜಗದೀಶ್ ಶೆಟ್ಟರ್
ಜಗದೀಶ್ ಶೆಟ್ಟರ್
Updated on

ಬೆಂಗಳೂರು: ಕೇಂದ್ರ ಸರ್ಕಾರದಿಂದ 2015-16 ನೇ ಸಾಲಿನ ಆರ್ಥಿಕ ವರ್ಷದಲ್ಲಿ ರಾಜ್ಯಕ್ಕೆ ಒಟ್ಟು ರು.30799.44 ಕೋಟಿ ಅನುದಾನ ಬಂದಿದ್ದು, ಈ ಬಗ್ಗೆ ಮಾತನಾಡದ ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಂದ್ರ ಸರ್ಕಾರ ಮಲತಾಯ ಧೋರಣೆ ಅನುಸರಿಸುತ್ತಿದೆ ಎನ್ನುವ ಮಾತು ನಿರಾಧಾರವಾಗಿದೆ ಎಂದು ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ತಿಳಿಸಿದ್ದಾರೆ.

ವಿಧಾನಸೌಧದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬರ ಪರಿಹಾರ, ಕೇಂದ್ರದ ತೆರಿಗೆ ಪಾಲು, ಸಹಾಯಧನ ಸೇರಿದಂತೆ 2015-16ನೇ ಸಾಲಿನಲ್ಲಿ ಇದುವರೆಗೆ ಕೇಂದ್ರ ಸರ್ಕಾರದಿಂದ 30,300 ಕೋಟಿ ರೂ. ಬಂದಿದೆ. ಅದನ್ನೇ ಸರಿಯಾಗಿ ಖರ್ಚು ಮಾಡದೆ ಕೇಂದ್ರ ಸರ್ಕಾರ ಹಣ ಬಿಡುಗಡೆ ಮಾಡುತ್ತಿಲ್ಲ ಎಂಬ ಸುಳ್ಳು ಆರೋಪ ಮಾಡಲಾಗುತ್ತಿದೆ ಎಂದರು.

ಕಳೆದ ವರ್ಷ ಸಂಭವಿಸಿದ್ದ ಬರಗಾಲದಿಂದ ಬೆಳೆ ಹಾನಿಗೊಳಗಾದ ರೈತರಿಗೆ ಪರಿಹಾರ ವಿತರಿಸಲು 1540.20 ಕೋಟಿ ರೂ., ಆಲಿಕಲ್ಲು ಮಳೆಹಾನಿ ಪರಿಹಾರಕ್ಕಾಗಿ 105.33 ಕೋಟಿ ರೂ. ಸೇರಿದಂತೆ ವಿಕೋಪ ಪರಿಹಾರ ನಿಧಿಯಿಂದ ಒಟ್ಟು 1852.53 ಕೋಟಿ ರೂ. ಬಿಡುಗಡೆಯಾಗಿದೆ. ಅದೇ ರೀತಿ ಕೇಂದ್ರ ಸರ್ಕಾರದಿಂದ ಸಹಾಯಧನವಾಗಿ 9957 ಕೋಟಿ ರೂ., 14ನೇ ಹಣಕಾಸು ಆಯೋಗದಡಿ 17,770 ಕೋಟಿ ರೂ. ತೆರಿಗೆ ಹಂಚಿಕೆ, ನಗರ ಸ್ಥಳೀಯ ಸಂಸ್ಥೆಗಳಿಗೆ 281 ಕೋಟಿ ರೂ., ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಗೆ 501.43 ಕೋಟಿ ರೂ. ರಾಜ್ಯಕ್ಕೆ ಬಿಡುಗಡೆಯಾಗಿದೆ ಎಂದು ಮಾಹಿತಿ ನೀಡಿದರು.

ಒಂದೆಡೆ ಬರ ಪರಿಹಾರ ಕಾಮಗಾರಿಗಳಿಗೆ ಕೇಂದ್ರ ಹಣ ಬಿಡುಗಡೆ ಮಾಡುತ್ತಿಲ್ಲ ಎಂದು ಆರೋಪಿಸುತ್ತಿರುವ ರಾಜ್ಯ ಸರ್ಕಾರ ಇದುವರೆಗೆ ಕೇವಲ 173.11 ಕೋಟಿ ರೂ. ಹಣವನ್ನು ಜಿಲ್ಲಾಧಿಕಾರಿಗಳಿಗೆ ಬಿಡುಗಡೆ ಮಾಡಿದೆ. ಆದರೆ, ಅದರಲ್ಲಿ ಖರ್ಚಾಗಿರುವುದು 83.64 ಕೋಟಿ ರೂ. ಮಾತ್ರ. ರಾಜ್ಯದ 2062 ಗ್ರಾಮಗಳಲ್ಲಿ ಕುಡಿಯುವ ನೀರಿನ ಕೊರತೆ ತೀವ್ರವಾಗಿದ್ದರೂ ಅದನ್ನು ಬಗೆಹರಿಸಲು ಕ್ರಮ ಕೈಗೊಂಡಿಲ್ಲ. ಬರ ಪರಿಹಾರಕ್ಕಾಗಿ ಕೇಂದ್ರ ಸರ್ಕಾರ ಡಿಸೆಂಬರ್‌ ಅಂತ್ಯಕ್ಕೆ 1540.20 ಕೋಟಿ ರೂ. ಬಿಡುಗಡೆ ಮಾಡಿದ್ದರೂ ಇದುವರೆಗೆ ನಯಾ ಪೈಸೆಯೂ ರೈತರ ಖಾತೆಗಳಿಗೆ ಜಮಾ ಆಗಿಲ್ಲ. ಕೇಂದ್ರ ಕೊಟ್ಟ ಹಣವನ್ನೂ ರೈತರಿಗೆ ತಲುಪಿಸಲಾಗಿಲ್ಲ ಎಂಬುದೇ ರಾಜ್ಯ ಸರ್ಕಾರದ ಆಡಳಿತ ಎಷ್ಟು ಹದಗೆಟ್ಟಿದೆ ಎಂಬುದಕ್ಕೆ ಸಾಕ್ಷಿ ಎಂದು ದೂರಿದರು.

ರಾಜ್ಯದಲ್ಲಿ ಕಳೆದ ಒಂದು ವರ್ಷದಿಂದ ಸಾವಿರಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ, ಇದುವರೆಗೆ ಪರಿಹಾರ ಸಿಕ್ಕಿರುವುದು 350 ಕುಟುಂಬಗಳಿಗೆ ಮಾತ್ರ. ರಾಜ್ಯ ಸರ್ಕಾರ ರೈತರ ಆತ್ಮಹತ್ಯೆ ಪರಿಹಾರವನ್ನು ಐದು ಲಕ್ಷ ರೂ.ಗೆ ಹೆಚ್ಚಿಸಿದ್ದರೂ ಇದುವರೆಗೆ ಒಬ್ಬ ರೈತನಿಗೂ ಆ ಮೊತ್ತ ತಲುಪಿಲ್ಲ ಎಂದು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com