ಬೆಂಗಳೂರು: ಮಂಗಳೂರು ಡಿವೈಎಸ್ಪಿ ಎಂ.ಕೆ ಗಣಪತಿ ಆತ್ಮಹತ್ಯೆ ಪ್ರಕರಣ ಸಂಬಂಧ ವಿಧಾನಸೌಧದಲ್ಲಿ ಪ್ರತಿಪಕ್ಷಗಳು ಸಚಿವ ಜಾರ್ಜ್ ರಾಜೀನಾಮೆಗೆ ಒತ್ತಾಯಿಸಿ ಅಹೋರಾತ್ರಿ ಧರಣಿ ಕೈಗೊಂಡಿವೆ. ಈ ಬೆನ್ನಲ್ಲೇ ಹಲವು ಕಾಂಗ್ರೆಸ್ ನಾಯಕರು ಜಾರ್ಜ್ ರಾಜೀನಾಮೆ ನೀಡುವುದೇ ಸೂಕ್ತ ಎಂದು ಹೇಳಿದ್ದಾರೆ.
ಗಣಪತಿ ಆತ್ಮಹತ್ಯೆ ಪ್ರಕರಣ ಜ್ವಲಂತ ವಿದ್ಯಮಾನವಾಗಿದ್ದು, ಸಿಎಂ ಸಿದ್ದರಾಮಯ್ಯ ಜಾರ್ಜ್ ರಾಜೀನಾಮೆ ಪಡೆಯುವುದೇ ಸೂಕ್ತ ಎಂದು ಕಾಂಗ್ರೆಸ್ ಶಾಸಕರೊಬ್ಬರು ಹೇಳಿದ್ದಾರೆ. ಆತ್ಮಹತ್ಯೆಗೂ ಮುನ್ನ ಗಣಪತಿ ಜಾರ್ಜ್ ಹೆಸರನ್ನು ಪ್ರಸ್ತಾಪಿಸಿರುವುದು ಗಂಭೀರ ವಿಷಯವಾಗಿದೆ. ಈ ಪ್ರಕರಣದಿಂದಾಗಿ ಪಕ್ಷಕ್ಕೆ ಹಾನಿಯಾಗಲಿದೆ. ಇದರಿಂದ ಮುಂದಿನ ಚುನಾವಣೆಯಲ್ಲಿ ಜನರ ಕೋಪಕ್ಕೆ ಕಾರಣವಾಗುತ್ತದೆ. ಹಾಗಾಗಿ ಜಾರ್ಜ್ ರಾಜೀನಾಮೆ ನೀಡಲಬೇಕು ಎಂಬುದು ಕಾಂಗ್ರೆಸ್ ಶಾಸಕರೊಬ್ಬರ ವಾದ.
ನಾನು ನನ್ನ ವಿಧಾನ ಸಭಾ ಕ್ಷೇತ್ರಕ್ಕೆ ಹೋದರೆ ಅಲ್ಲಿನ ಜನ ನನ್ನನ್ನು ತಪ್ಪಿತಸ್ಥನೆಂಬ ರೀತಿಯಲ್ಲಿ ನೋಡುತ್ತಾರೆ. ಡಿವೈಎಸ್ಪಿ ಸಾವಿಗೆ ನಾನೇ ಹೊಣೆ ಎಂಬಂತೆ ಕಾಣುತ್ತಾರೆ.ಇದು ಕಾಂಗ್ರೆಸ್ ನ ಹಲವು ನಾಯಕರುಗಳಿಗೆ ಇರಿಸುಮುರಿಸು ಉಂಟು ಮಾಡುತ್ತಿದೆ. ಮೊದಲು ಜಾರ್ಜ್ ರಾಜೀನಾಮೆ ನೀಡಲಿ, ತನಿಖೆ ನಂತರ ಪ್ರಕರಣದಲ್ಲಿ ಅವರ ಪಾತ್ರವಿಲ್ಲ ಎಂಬುದು ಸಾಬೀತಾದರೇ ಮತ್ತೆ ಅಧಿಕಾರ ವಹಿಸಿಕೊಳ್ಳಲಿ ಎಂದು ಮತ್ತೊಬ್ಬ ಕಾಂಗ್ರೆಸ್ ಶಾಸಕ ಅಭಿಪ್ರಾಯ ಪಟ್ಟಿದ್ದಾರೆ.
ಜಾರ್ಜ್ ಪ್ರಕರಣ ಸರ್ಕಾರ ಹಾಗೂ ಪಕ್ಷಕ್ಕೆ ಬಹುದೊಡ್ಡ ಮುಜುಗರ ತಂದಿಟ್ಟಿದೆ ಎಂದು ಕಾಂಗ್ರೆಸ್ ನ ಹಿರಿಯ ಕೌನ್ಸಿಲರ್ ಹೇಳಿದ್ದಾರೆ. ಪ್ರತಿಪಕ್ಷಗಳು ಇದನ್ನು ಬಹು ದೊಡ್ಡ ಅಸ್ತ್ರವನ್ನಾಗಿ ಮಾಡಿಕೊಳ್ಳಲಿವೆ ಎಂದು ತಿಳಿಸಿದ್ದಾರೆ.
ಐಎಎಸ್ ಅಧಿಕಾರಿ ಡಿ.ಕೆ ರವಿ ಆತ್ಮಹತ್ಯೆ ಪ್ರಕರಣದಲ್ಲಿ ಯಾರ ಹೆಸರು ಪ್ರಸ್ತಾಪವಾಗಿರಲಿಲ್ಲ.ಆದರೆ ಈ ಪ್ರಕರಣದಲ್ಲಿ ನೇರವಾಗಿ ಸಂಪುಟ ಸಚಿವರ ಹೆಸರನ್ನು ಹೇಳಲಾಗಿದೆ. ಹೀಗಾಗಿ ಜಾರ್ಜ್ ರಾಜೀನಾಮೆ ನೀಡಲೇಬೇಕೆಂದು ಕಾಂಗ್ರೆಸ್ ವಿಧಾನ ಪರಿಷತ್ ಸದಸ್ಯ ಆಗ್ರಹಿಸಿದ್ದಾರೆ.
ಬಿಜೆಪಿಗೆ ಜಾರ್ಜ್ ರಾಜೀನಾಮೆ ಮಾತ್ರ ಬೇಕಿದೆ, ಅವರಿಗೆ ಸತ್ಯ ಏನು ಎಂಬುದು ತಿಳಿಯಬೇಕಾಗಿಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಪ್ರಕರಣ ತನಿಖೆಯಾಗದೇ ಜಾರ್ಜ್ ರಾಜೀನಾಮೆ ಹೇಗೆ ರಾಜೀನಾಮೆ ನೀಡುತ್ತಾರೆ. ತನಿಖೆ ನಡೆದು ಜಾರ್ಜ್ ತಪ್ಪಿತಸ್ತರು ಎಂದು ತಿಳಿದು ಬಂದರೇ ಆವಾಗ ರಾಜೀನಾಮೆ ಅನಿವಾರ್ಯ. ಸಚಿವರುಗಳು ರಾಜೀನಾಮೆ ನೀಡುತ್ತಾ ಹೋದರೇ ಸರ್ಕಾರ ಹೇಗೆ ಕೆಲಸ ನಿರ್ವಹಿಸಲಿದೆ ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.
Advertisement