ಬೆಂಗಳೂರು: ಭವ್ಯ ಇತಿಹಾಸವುಳ್ಳ ವಿಜಯನಗರ ಸಾಮ್ರಾಜ್ಯದ ಅರಸ ಶ್ರೀಕೃಷ್ಣದೇವರಾಯ ನೀಡಿದ ಆಡಳಿತದಂತೆ ಕೇಂದ್ರದಲ್ಲಿ ಪ್ರಧಾನಿ ಮೋದಿ ಆಡಳಿತ ನೀಡುತ್ತಿದ್ದಾರೆ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಹಾಡಿ ಹೊಗಳಿದ್ದಾರೆ.
ಕರ್ನಾಟಕ ರಾಜು ಕ್ಷತ್ರಿಯ ಸಂಘ ಅರಮನೆ ಆವರಣದಲ್ಲಿ ಆಯೋಜಿಸಿದ್ದ ಕೃಷ್ಣದೇವರಾಯರ 507ನೇ ಸುವರ್ಣ ಆಡಳಿತದ ಸವಿನೆನಪು ಹಾಗೂ ರಾಜು ಕ್ಷತ್ರಿಯ ರಾಜ್ಯಮಟ್ಟದ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ವಿಜಯನಗರ ಸಾಮ್ರಾಜ್ಯ ಶ್ರೀಮಂತ ಹಾಗೂ ಶಕ್ತಿಶಾಲಿ ಜ್ಞಾನವನ್ನು ಹೊಂದಿದ್ದ ರಾಜ್ಯವಾಗಿತ್ತು. ವಿಜ್ಞಾನ, ತಂತ್ರಜ್ಞಾನ ಕೇಂದ್ರವಾಗಿಯೂ ಪ್ರಸಿದ್ಧಿ ಪಡೆದಿತ್ತು. ಮೋದಿ ಅವರು ಸಹ ಭಾರತವನ್ನು ಸಂಪತ್ಭರಿತ, ಶಕ್ತಿಶಾಲಿ, ಜ್ಞಾನಯುತ ರಾಷ್ಟ್ರವನ್ನಾಗಿ ಮರು ನಿರ್ಮಾಣ ಮಾಡಲು ಮುಂದಾಗಿದ್ದಾರೆ ಎಂದರು.
ವಿದೇಶಿ ಹೂಡಿಕೆದಾರರು ವಿಜಯನಗರ ಸಾಮ್ರಾಜ್ಯದಲ್ಲಿ ಬಂಡವಾಳ ತೊಡಗಿಸಿದ್ದ ಉಲ್ಲೇಖವಿದೆ. ಅದೇ ರೀತಿ ವಿದೇಶಿ ಹೂಡಿಕೆದಾರರು ದೇಶದಲ್ಲಿ ಕೋಟ್ಯಂತರ ರೂಪಾಯಿ ಹೂಡಿಕೆ ಮಾಡಲು ಮುಂದೆ ಬಂದಿದ್ದಾರೆ ಎಂದು ಅಭಿಪ್ರಾಯ ಪಟ್ಟರು. ಭಾರತದ ನಾಗರಿಕತೆಯನ್ನು ಹೀಯಾಳಿಸುವ ಅನೇಕ ವಿದೇಶಿಗರು ವಿಜಯನಗರ ಸಾಮ್ರಾಜ್ಯದ ಬಗ್ಗೆ ತಿಳಿಯಬೇಕು. ಶ್ರೀಮಂತ ಪರಂಪರೆಯ ರಾಜು ಕ್ಷತ್ರಿಯ ಸಮುದಾಯದವರು ಸೇವೆಯ ಮೂಲಕ ತಮ್ಮ ಅಸ್ತಿತ್ವವನ್ನು ರಾಷ್ಟ್ರಕ್ಕೆ ಸಾರಬೇಕು ಎಂದು ಕರೆ ನೀಡಿದರು.
Advertisement