ಬೆಂಗಳೂರು: ಇಂಧನ ಸಚಿವ ಡಿ.ಕೆ.ಶಿವಕುಮಾರ್ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಪರಸ್ಪರ ಒಪ್ಪಂದ ಮಾಡಿಕೊಂಡಿದ್ದಾರೆ. ಪಕ್ಷೇತರ ಶಾಸಕರಿಂದ ಮತ ಕೊಡಿಸುವ ಭರವಸೆ ನೀಡಿದ್ದಾರೆ. ಆದರೆ ನಮ್ಮ ಹೋರಾಟವನ್ನು ನಾವು ಕೈ ಬಿಡುವುದಿಲ್ಲ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.
ರಾಜ್ಯಸಭೆ ಮತ್ತು ವಿಧಾನಪರಿಷತ್ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿಗಳು ಸೋತರೆ ಅದರಿಂದ ಪಕ್ಷ ಮುಳುಗಿ ಹೋಗುವುದಿಲ್ಲ. ಇಂಥ ಏಳುಬೀಳುಗಳನ್ನು ಸಾಕಷ್ಟು ಕಂಡಿದ್ದೇವೆ ಎಂದು ಹೇಳುವ ಮೂಲಕ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಚುನಾವಣೆಗೂ ಮುನ್ನವೇ ಸೋಲೊಪ್ಪಿಕೊಂಡಿದ್ದಾರೆ.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಇಪ್ಪತ್ತು ವರ್ಷಗಳ ಹಿಂದೆ ಪಕ್ಷ ಹೀನಾಯವಾಗಿ ಸೋತಿತ್ತು. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಿ ಸೋತಿದ್ದರು. ಆದರೂ ಛಲಬಿಡದೇ ರಾಜ್ಯದಲ್ಲಿ ಪಕ್ಷವನ್ನು ಕಟ್ಟಿ, ಬೆಳೆಸಿ, ಮತ್ತೆ ಅಧಿಕಾರಕ್ಕೆ ತಂದರು ಎಂದು ಹೇಳಿದರು.
ಪಕ್ಷೇತರ ಶಾಸಕರು ಮೊದಲು ಜೆಡಿಎಸ್ ಅಭ್ಯರ್ಥಿ ಬಿ.ಎಂ.ಫಾರೂಕ್ ಅವರಿಗೆ ಬೆಂಬಲ ಸೂಚಿಸಿದರು. ನಮ್ಮನ್ನು ಬಳಕೆ ಮಾಡಿಕೊಂಡು ತಮ್ಮ ಬೇಡಿಕೆ ಹೆಚ್ಚಿಸಿಕೊಂಡರು. ನಂತರ ಸರ್ಕಾರದ ಆಮಿಷಕ್ಕೆ ಬಲಿಯಾಗಿ ಕಾಂಗ್ರೆಸ್ ಪರವಾಗಿ ಮತ ಹಾಕುವುದಾಗಿ ಹೇಳಿದ್ದಾರೆ. ಆದರೂ ನಾವು ಯಾರ ಮನೆ ಬಾಗಿಲಿಗೂ ಹೋಗಿ ಭಿಕ್ಷೆ ಬೇಡಲ್ಲ. ಸ್ವಾಭಿಮಾನ ಕಳೆದುಕೊಂಡು ನಾವು ರಾಜಕಾರಣ ಮಾಡುವುದಿಲ್ಲ. ಕುದುರೆ ವ್ಯಾಪಾರ ಮಾಡುವುದಿಲ್ಲ. ಅಂತಿಮ ಕ್ಷಣದವರೆಗೂ ಹೋರಾಡುತ್ತೇವೆ ಎಂದರು.
ಪಕ್ಷದ ಪ್ರಮುಖ ನಾಯಕರ ಮತ್ತು ಶಾಸಕಾಂಗ ಸಭೆಯನ್ನು ಜೂ.12ಕ್ಕೆ ಕರೆಯಲಾಗಿದೆ. ಪಕ್ಷ ವಿರೋಧಿ ಚಟುವಟಿಕೆ ನಡೆಸುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರುಗಿಸುವುದು ಅದರ ಉದ್ದೇಶವಾಗಿದೆ. ಕೆಲ ಶಾಸಕರು ಬಹಿರಂಗವಾಗಿ ಕಾಂಗ್ರೆಸ್ ಬೆಂಬಲಿಸುವುದಾಗಿ ಹೇಳಿಕೆ ನೀಡಿರುವುದನ್ನು ನಮ್ಮ ಪಕ್ಷ ಗಂಭೀರವಾಗಿ ಪರಿಗಣಿಸಿದೆ ಎಂದು ಎಚ್ಡಿಕೆ ಹೇಳಿದ್ದಾರೆ,
ನಮ್ಮದು ಹಿಂದು ಧರ್ಮ. ಕಠೋರ ತಪಸ್ಸು ಮಾಡಿ ವರ ಪಡೆದಿರುವ ಹಲವು ಕಥೆಗಳನ್ನು ಪುರಾಣಗಳಿಂದ ಕೇಳಿ ತಿಳಿದುಕೊಂಡಿದ್ದೇವೆ. ಭಸ್ಮಾಸುರ, ಬಲಿ ಚಕ್ರವರ್ತಿ ಏನು ಮಾಡಿದರು? ದೇವರನ್ನೂ ಬಿಡಲಿಲ್ಲ. ಅದೇ ದೇವರಿಂದ ಪಡೆದ ವರವನ್ನು ದುರುಪಯೋಗ ಪಡಿಸಿಕೊಂಡು ದೇವತೆಗಳ ಮೇಲೆಯೇ ಆಕ್ರಮಣ ಮಾಡಲಾಗಿದೆ. ಅಂಥ ಹಿನ್ನೆಲೆಯನ್ನು ಈ ದೇಶ ಹೊಂದಿದೆ ಎಂದು ಕುಮಾರಸ್ವಾಮಿ ಹೇಳಿದರು. ಹಾಗೂ ಬಂಡಾಯ ಸಾರಿರುವ ಜೆಡಿಎಸ್ ಶಾಸಕರಾದ ಜಮೀರ್ ಅಹಮದ್, ಚಲುವರಾಯಸ್ವಾಮಿ ಅವರನ್ನು ಕುಮಾರಸ್ವಾಮಿ ಪರೋಕ್ಷವಾಗಿ ಟೀಕಿಸಿದರು.
Advertisement