ಬೆಂಗಳೂರು: ರಾಜ್ಯದಲ್ಲಿ ಮೌಢ್ಯ ನಿಷೇಧ ಕಾಯ್ದೆ ಜಾರಿಗೆ ತರಲು ಹೊರಟಿದ್ದ ಮುಖ್ಯಮಂತ್ರಿ ಸಿದ್ಧರಾಮಯ್ಯನವರೇ ಇದೀಗ ಮೂಢನಂಬಿಕೆ ಮೊರೆ ಹೋಗಿದ್ದಾರೆ. ಇತ್ತೀಚೆಗೆ ಕಾಗೆ ಕೂತಿದ್ದ ತಮ್ಮ ಕಾರನ್ನು ತಾಂತ್ರಿಕ ತೊಂದರೆ ನೆಪವೊಡ್ಡಿ ಬದಲಿಸಿದ್ದಾರೆ. ಹೊಸ ಫಾರ್ಚುನರ್ ಕಾರನ್ನು ಖರೀದಿಸಿ ಅದಕ್ಕೆ ಪೂಜೆ ಸಲ್ಲಿಸಿ ಸಚಿವಾಲಯ ಅಧಿಕಾರಿಗಳು ನಿನ್ನೆ ಸಿಎಂ ನಿವಾಸ ಕಾವೇರಿಗೆ ಹಸ್ತಾಂತರಿಸಿದ್ದಾರೆ. ಹೊಸ ಕಾರಿನ ನಂಬರ್ 2016 ಎಂದಿದೆ.
ರಾಜ್ಯಸಭೆ ಚುನಾವಣೆ ತಯಾರಿ ಕುರಿತು ಚರ್ಚಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಗೃಹಕಚೇರಿ ಕೃಷ್ಣದಲ್ಲಿ ಜೂ.2ರಂದು ವಿವಿಧ ಹಂತದ ಸಭೆ ನಡೆಸುತ್ತಿದ್ದಾಗ ಹೊರಗಡೆ ನಿಂತಿದ್ದ ಕಾರಿನ ಮೇಲೆ ಗಾಯಗೊಂಡಿದ್ದ ಕಾಗೆಯೊಂದು ಹತ್ತಿ ಕುಳಿತಿತ್ತು. ಅದನ್ನು ಓಡಿಸಲು ಸಿಬ್ಬಂದಿ ಎಷ್ಟೇ ಪ್ರಯತ್ನಪಟ್ಟರೂ ಸುಮಾರು ಹೊತ್ತಿನವರೆಗೆ ಕದರಿರಲಿಲ್ಲ. ನಂತರ ಸಿಬ್ಬಂದಿಯೇ ಕೈಯಿಂದ ಕೆಳಗಿಳಿಸಿದ್ದರು. ಈ ಬಗ್ಗೆ ಸುದ್ದಿವಾಹಿನಿಗಳು ವಿಡಿಯೋ ಸಹಿತ ಪ್ರಸಾರ ಮಾಡಿದ್ದರಿಂದ ರಾಜ್ಯಮಟ್ಟದಲ್ಲಿ ಸುದ್ದಿಯಾಗಿತ್ತು.
ಕಾರಿನ ಮೇಲೆ ಕಾಗೆ ಕುಳಿತಿದ್ದರಿಂದ ಅಪಶಕುನವೆಂದು ಕೆಲವರು ಹೇಳಿದ್ದರು. ಆದರೆ ಮೂಢನಂಬಿಕೆಗಳನ್ನು ಲೆಕ್ಕಕ್ಕೆ ತೆಗೆದುಕೊಳ್ಳದ ಮುಖ್ಯಮಂತ್ರಿ ಸಿದ್ದರಾಮಯ್ಯ ಇದ್ಯಾವುದನ್ನೂ ಕೇರ್ ಮಾಡಿರಲಿಲ್ಲ, ಆದರೆ ಅಂದೇ ಕೂಡ್ಲಿಗಿ ಡಿವೈಎಸ್ಪಿ ಅನುಪಮಾ ಶೆಣೈ ರಾಜೀನಾಮೆ ಪ್ರಕರಣ ಶುರುವಾಗಿದ್ದರಿಂದ ಸಿಎಂ ಮನಸ್ಸು ಬದಲಾಯಿಸಿದರೆಂದು ಕಾಣುತ್ತದೆ. ಅಪಶಕುನವೆಂದು ತೀರ್ಮಾನಿಸಿರುವ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಹೊಸ ಕಾರು ಖರೀದಿಸಲು ಪ್ರಸ್ತಾವನೆ ಮುಂದಿಟ್ಟಿತ್ತು. ಅದರಂತೆ ಹಳೆ ಕಾರು ಹೋಗಿ ಇದೀಗ ಹೊಸ ಕಾರು ಬಂದಿದೆ.
Advertisement