ಬೆಂಗಳೂರು: ತಮ್ಮನ್ನು ಶನಿ ಎಂದು ಕರೆದಿದ್ದ ಜೆಡಿಎಸ್ ಭಿನ್ನಮತೀಯ ಶಾಸಕರಿಗೆ ಮಂಗಳವಾರ ತಿರುಗೇಟು ನೀಡಿರುವ ಮಾಜಿ ಸಚಿವ ಜೆಡಿಎಸ್ ಶಾಸಕ ಎಚ್.ಡಿ.ರೇವಣ್ಣ ಅವರು, ಶನಿ ಈಗ ಕಾಂಗ್ರೆಸ್ ಗೆ ಶಿಫ್ಟ್ ಆಗಿದೆ ಎಂದು ಹೇಳಿದ್ದಾರೆ.
ಇಂದು ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿದ ರೇವಣ್ಣ, ಜೆಡಿಎಸ್ ಭಿನ್ನಮತೀಯ ಶಾಸಕರ ಆರೋಪಗಳಿಗೆ ಉತ್ತರ ನೀಡಿದರು. ರಾಜ್ಯಸಭಾ ಚುನಾವಣೆಯಲ್ಲಿ ನಾನು ನಯಾ ಪೈಸೆ ಹಣ ಪಡೆದಿಲ್ಲ. ಬೇಕಾದರೆ ಧರ್ಮಸ್ಥಳದಲ್ಲಿ ಪ್ರಮಾಣ ಮಾಡಲು ಸಿದ್ಧ ಎಂದರು.
ಕೆ.ಸಿ .ರಾಮಮೂರ್ತಿಯಿಂದ ಹಣ ಪಡೆದಿದ್ದಾರೆ ಎಂದು ಆರೋಪ ಮಾಡಿದ್ದಾರೆ ಬೇಕಾದರೆ ಅವರನ್ನೂ ಕರೆದುಕೊಂಡು ಧರ್ಮಸ್ಥಳಕ್ಕೆ ಬರಲಿ ಎಂದು ನಿನ್ನೆ ತಮ್ಮ ವಿರುದ್ಧ ಆರೋಪ ಮಾಡಿದ್ದ ಮಾಗಡಿ ಶಾಸಕ ಎಚ್.ಸಿ.ಬಾಲಕೃಷ್ಣ ಅವರಿಗೆ ಪ್ರತಿ ಸವಾಲು ಹಾಕಿದರು.
ಭಿನ್ನಮತೀಯ ಶಾಸಕರ ವಿರುದ್ದ ವಾಗ್ಧಾಳಿ ನಡೆಸಿದ ರೇವಣ್ಣ, ಸಮ್ಮಿಶ್ರ ಸರ್ಕಾರದಲ್ಲಿ ನನ್ನನ್ನು ಮಂತ್ರಿ ಮಾಡಿ ಎಂದಿರಲಿಲ್ಲ ಮತ್ತು ಎಂದಿಗೂ ನಾನು ಅಧಿಕಾರಕ್ಕಾಗಿ ಆಸೆ ಪಟ್ಟು ಕೆಲಸ ಮಾಡಿಲ್ಲ ಎಂದರು.
ನಾನು ನಮ್ಮ ಅಪ್ಪನ ಮಾತು ಕೇಳಿಕೊಂಡು ಬಂದಿದ್ದೇನೆ. ಅಧಿಕಾರಕ್ಕೆ ಎಂದೂ ಆಸೆ ಪಟ್ಟವನಲ್ಲ,1986 ರಲ್ಲಿ ಜಿ.ಪಂ ಚುನಾವಣೆಗೆ ಸ್ಪರ್ಧಿಸಿದ್ದೆ ಆದರೆ ಅಧ್ಯಕ್ಷ ಸ್ಥಾನಕ್ಕಾಗಿ ಸ್ಪರ್ಧಿಸಿರಲಿಲ್ಲ ಎಂದರು. ಅಲ್ಲದೆ ನಾನು 1977 ರಿಂದಲೂ ರಾಜಕೀಯದಲ್ಲಿದ್ದೇನೆ ಎಲ್ಲವನ್ನೂ ನಾನು ಈಗ ಹೇಳಿದರೆ ಸರಿ ಇರುವುದಿಲ್ಲ ಸಮಯ ಬಂದಾಗ ಹೇಳುತತೇನೆ ಎಂದರು.
ಇದೇ ವೇಳೆ ನನ್ನ ತಂದೆ ದೇವೇಗೌಡರು ಪ್ರಧಾನಿಯಾದುದಕ್ಕೆ ನಾನು ಖುಷಿ ಪಡಲಿಲ್ಲ, ಆದರೆ ಸಿದ್ದರಾಮಯ್ಯ ಅವರಿಗೆ ಮುಖ್ಯಮಂತ್ರಿ ಸ್ಥಾನ ಕೈತಪ್ಪಿಹೋದಾಗ ಕಣ್ಣೀರಿಟ್ಟಿದ್ದೆ ಎಂದು ಜೆಡಿಎಸ್ ನಾಯಕ ಎಚ್.ಡಿ.ರೇವಣ್ಣ ಹೇಳಿದ್ದಾರೆ.
ನಿನ್ನೆ ಜೆಡಿಎಸ್ ಬಂಡಾಯ ಶಾಸಕ ಎಚ್. ಸಿ, ಬಾಲಕೃಷ್ಣ ಅವರು, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರಿಗೆ ನಿಜವಾದ ಶನಿ ಎಚ್.ಡಿ.ರೇವಣ್ಣ ಎಂದು ಆರೋಪಿಸಿದ್ದರು. ಅಲ್ಲದೆ ರೇವಣ್ಣ ಅವರು ರಾಜ್ಯಸಭೆ ಚುನಾವಣೆಯಲ್ಲಿ ಹಣ ಪಡೆದಿಲ್ಲ ಎಂದು ಆಣೆ ಮಾಡಲಿ ಎಂದು ಸವಾಲು ಹಾಕಿದ್ದರು.