ಮಂಡ್ಯ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂಪುಟ ಪುನರಚನೆಗಾಗಿ ದೆಹಲಿಗೆ ತೆರಳಿದ್ದು, ಇತ್ತ ಮಂಡ್ಯದಲ್ಲಿ ವಸತಿ ಸಚಿವ ಅಂಬರೀಷ್ ಅವರು, ತಮ್ಮನ್ನು ಸಂಪುಟದಿಂದ ಬಿಟ್ಟರೆ ತಮಗೆ ಯಾವುದೇ ಬೇಸರವಿಲ್ಲ ಎಂದು ಶುಕ್ರವಾರ ಹೇಳಿದ್ದಾರೆ.
ತಮ್ಮನ್ನು ಸಂಪುಟದಿಂದ ಕೈಬಿಡುವ ಸಾಧ್ಯತೆ ಬಗ್ಗೆ ವರದಿಗಾರರಿಗೆ ಪ್ರತಿಕ್ರಿಯಿಸಿದ ಅಂಬರೀಷ್, ನನ್ನನ್ನು ಸಚಿವನಾಗಿ ಮಾಡಿದ್ದು ಅವರೇ, ಈಗ ತೆಗೆಯುವುದು ಅವರೇ ಎಂದು ಪರೋಕ್ಷವಾಗಿ ತಮ್ಮನ್ನು ಕೈಬಿಡುತ್ತಿರುವ ಸೂಚನೆ ನೀಡಿದರು.
ಸಚಿವನಾಗಿ ಮೂರು ವರ್ಷದ ನನ್ನ ಸಾಧನೆ ಏನು ಎಂಬುದು ಜನರೇ ಹೇಳಬೇಕು ಎಂದಿರುವ ಅಂಬರೀಶ್, ಯಾರನ್ನಾದರು ಶಿಕ್ಷಿಸಬೇಕು ಎಂದರೆ ತಪ್ಪು ಮಾಡಿರಬೇಕು. ನನ್ನಲ್ಲಿ ಪಿನ್ ಪಾಯಿಂಟ್ ತಪ್ಪು ಕಂಡು ಹಿಡಿಯಲು ಸಾಧ್ಯವಿಲ್ಲ ಎಂದಿದ್ದಾರೆ. ಅಲ್ಲದೆ ಸಂಪುಟದಿಂದ ನನ್ನನ್ನು ಕೈಬಿಟ್ಟರೆ ಪರವಾಗಿಲ್ಲ ಎಂದು ಹೇಳಿದ್ದಾರೆ. ಈ ಮೂಲಕ ಸಚಿವ ಸ್ಥಾನ ತ್ಯಜಿಸಲು ಮಾನಸಿಕವಾಗಿ ಸಿದ್ಧರಾಗಿದ್ದಾರೆ.
ಸಂಪುಟ ವಿಸ್ತರಣೆ ಸಂಬಂಧ ದೆಹಲಿಗೆ ತೆರಳಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಹಾಗೂ ಕರ್ನಾಟಕದ ಕಾಂಗ್ರೆಸ್ ಉಸ್ತುವಾರಿ ದಿಗ್ವಿಜಯ್ ಸಿಂಗ್ ಅವರು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಿದ್ದು, ಸಂಪುಟ ಪುನಾರಚನೆ ಬಗ್ಗೆ ಚರ್ಚಿಸುತ್ತಿದ್ದಾರೆ.
ವಸತಿ ಸಚಿವ ಅಂಬರೀಷ್ ಸೇರಿದಂತೆ ಸಂಪುಟದಿಂದ ಸುಮಾರು 10ರಿಂದ 12 ಸಚಿವರನ್ನು ಕೈಬಿಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.