ಮಂಡ್ಯ: ನಿನ್ನೆ ಮಂಡ್ಯದಲ್ಲಿ ಜೆಡಿಎಸ್ ಸಮಾವೇಶಕ್ಕೆ ಜಿಲ್ಲೆಯ ಇತಿಹಾಸದಲ್ಲೇ ಇದೆ ಮೊದಲ ಬಾರಿಗೆ ಜನರಿಗೆ ಬಿರಿಯಾನಿ ಮತ್ತು 200 ರುಪಾಯಿ ಕೊಟ್ಟು ಜನರನ್ನು ಕರೆತರಲಾಗಿತ್ತು ಎಂದು ಜೆಡಿಎಸ್ ನಿಂದ ಅಮಾನತುಗೊಂಡಿರುವ ನಾಗಮಂಗಲ ಶಾಸಕ ಎನ್.ಚೆಲುವರಾಯಸ್ವಾಮಿ ಅವರು ವ್ಯಂಗ್ಯವಾಡಿದ್ದಾರೆ.
ಮಂಡ್ಯದಲ್ಲಿ ನಡೆದ ಸಮಾವೇಶಕ್ಕೆ ಎಷ್ಟು ಜನ ಸೇರಿದ್ದರು ಎಂಬುದು ಗುಪ್ತಚಲ ಇಲಾಖೆ ಮಾಹಿತಿ ಪಡೆದರೆ ಗೊತ್ತಾಗುತ್ತೆ. ಆ ಸಮಾರಂಭ ಒಂದು ತಾಲೂಕು ಮಟ್ಟದ ಸಮಾವೇಶದಂತ್ತಿತ್ತು. ಅದಕ್ಕೆ ನಾನು ಪ್ರತಿಕ್ರಿಯೆ ನೀಡುವ ಅಗತ್ಯ ಇಲ್ಲ ಎಂದರು.
ಇನ್ನು ಸಮಾವೇಶದಲ್ಲಿ ತಮ್ಮ ವಿರುದ್ಧ ವಾಗ್ದಾಳಿ ನಡೆಸಿದ್ದ ಜೆಡಿಎಸ್ ವಿಧಾನ ಪರಿಷತ್ ಉಪ ಸಭಾಪತಿ ಮರಿತಿಬ್ಬೇಗೌಡರ ಬಗ್ಗೆ ಪ್ರತಿಕ್ರಿಯಿಸಿದ ಚೆಲುವರಾಯಸ್ವಾಮಿ, ಅವರು ಈ ಉಪ ಸಭಾಪತಿಯಾಗಿದ್ದು, ಸಭಾಪತಿಯಾಗಲು ಹೊರಟಿದ್ದಾರೆ. ನನಗೆ ಒಂದೆರಡು ಬೈದು ಅವರು ಸಭಾಪತಿಯಾದರೆ ಸಂತೋಷ ಎಂದರು.
ನನ್ನ ರಾಜಕೀಯ ನಡೆಯನ್ನು ಸಮಯ ಬಂದಾಗ ಜನರೇ ತೀರ್ಮಾನಿಸುತ್ತಾರೆ. ಪಕ್ಷದ ಅಧಿಕಾರ ಸಂಪೂರ್ಣ ದೇವೇಗೌಡರ ಕೈಯಲ್ಲಿದೆ. ಅವರು ಏನು ಬೇಕಾದರೂ ಮಾಡಲಿ. ನಿನ್ನೆ ಸವಾಮೇಶದಲ್ಲಿ ಅವರು ನನ್ನ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ ಅಂತ ಅನಿಸಲಿಲ್ಲ ಎಂದರು.