ಬೆಂಗಳೂರು: ನ್ಯಾ. ಎಸ್.ಆರ್. ನಾಯಕ್ ಅವರನ್ನು ಲೋಕಾಯುಕ್ತರನ್ನಾಗಿ ನೇಮಿಸುವಂತೆ ರಾಜ್ಯ ಸರ್ಕಾರದ ಶಿಫಾರಸು ಕುರಿತು ರಾಜ್ಯಪಾಲ ವಜುಭಾಯಿ ವಾಲಾ ಕೆಲವು ಸ್ಪಷ್ಟನೆ ಕೋರಿದ್ದಾರೆ ಎನ್ನಲಾಗಿದೆ
ಜನಾಧಿಕಾರ ಸಂಘರ್ಷ ಪರಿಷತ್, ನ್ಯಾ. ಎಸ್.ಆರ್. ನಾಯಕ್ ವಿರುದ್ದ ಎರಡು ನಿವೇಶನ ಪಡೆದು ನಿಯಮ ಉಲ್ಲಂಘನೆ ಹಾಗೂ ಪೂರ್ಣ ಆಸ್ತಿ ಘೋಷಣೆ ಮಾಡದಿರುವುದು ಸೇರಿದಂತೆ ಕೆಲವೊಂದು ಆರೋಪಗಳನ್ನು ಮಾಡಿದೆ. ಇದರ ನಡುವೆ, ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು ಕೂಡ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರಾದವರು ಆ ನಂತರ ಲೋಕಾಯುಕ್ತ ಹುದ್ದೆಯಂತಹ ಸ್ಥಾನ ಅಲಂಕರಿಸಲು ನಿಯಮಾವಳಿ
ಪ್ರಕಾರ ಸಾಧ್ಯವಿಲ್ಲ ಎಂದು ಸರ್ಕಾರಕ್ಕೆ ಪತ್ರ ಬರೆದು ಅದರ ಪ್ರತಿಯನ್ನು ರಾಜ್ಯಪಾಲರಿಗೂ ಕಳುಹಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಕಾನೂನು ಇಲಾಖೆಯ ಅಭಿಪ್ರಾಯ ತಿಳಿಸುವಂತೆ ರಾಜ್ಯಪಾಲರು ಸರ್ಕಾರದ ಮುಖ್ಯ ಕಾರ್ಯದರ್ಶಿಯವರಿಗೆ ಸೂಚನೆ ನೀಡಿದ್ದಾರೆ. ಅಲ್ಲದೆ ಎಸ್.ಆರ್. ನಾಯಕ್ ವಿರುದ್ಧದ ಆರೋಪಗಳ ಬಗ್ಗೆಯೂ ಸ್ಪಷ್ಟನೆ ಕೇಳಿದ್ದಾರೆ ಎಂದು ಹೇಳಲಾಗಿದೆ. ಆದರೆ, ಈ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ಸರ್ಕಾರದ ಮೂಲಗಳು ತಿಳಿಸಿವೆ.
ಕಾನೂನು ಇಲಾಖೆಯ ಅಭಿಪ್ರಾಯದ ನಂತರ ರಾಜ್ಯಪಾಲರು ಎಸ್.ಆರ್.ನಾಯಕ್ ಹೆಸರನ್ನು ಲೋಕಾಯುಕ್ತ ಸ್ಥಾನಕ್ಕೆ ಒಪ್ಪಲೂಬಹುದು ಅಥವಾ ಬೇರೊಂದು ಹೆಸರು ಸೂಚಿಸುವಂತೆ ರಾಜ್ಯ ಸರ್ಕಾರಕ್ಕೆ ತಿಳಿಸಲೂಬಹುದು ಎಂದು ಹೇಳಲಾಗಿದೆ. ಸಿಎಂ ಸಿದ್ದರಾಮಯ್ಯ ಮತ್ತು ಸ್ಪೀಕರ್ ಕಾಗೋಡು ತಿಮ್ಮಪ್ಪ ಎಸ್. ಆರ್ ನಾಯಕ್ ಅವರ ಹೆಸರನ್ನು ಶಿಫಾರಸ್ಸು ಮಾಡಿದ್ದರು,
Advertisement