ವಿಧಾನಸೌಧದಲ್ಲಿ ಜಪ್ತಿಯಾದ 1.97 ಕೋಟಿ ಹಣದ ಬಗ್ಗೆ ಬಿಎಸ್ ವೈ ಗೆ ಗೊತ್ತು: ಎಚ್ ಡಿಕೆ ಹೊಸ ಬಾಂಬ್
ಹಾಸನ: ಇತ್ತೀಚೆಗೆ ವಿಧಾನಸೌಧ ಆವರಣದಲ್ಲಿ ವಕೀಲರೊಬ್ಬರ ಕಾರಿನಲ್ಲಿ ಜಪ್ತಿಯಾದ 1.97 ಕೋಟಿ ರೂಪಾಯಿ ಯಾರಿಗೆ ಸೇರಿದೆ ಎನ್ನುವ ಸಂಪೂರ್ಣ ಮಾಹಿತಿ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಅವರಿಗೆ ತಿಳಿದಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರ ಸ್ವಾಮಿ ಆರೋಪಿಸಿದ್ದಾರೆ.
ಹಾಸನಕ್ಕೆ ಭೇಟಿ ನೀಡಿದ ಅವರು ಹಾಸನಾಂಬೆಯ ದರ್ಶನ ಪಡೆದು ಮಾತನಾಡಿದರು. ಜಪ್ತಿಯಾದ 1.97 ಕೋಟಿ ಹಣದ ಬಗ್ಗೆ ಯಡಿಯೂರಪ್ಪನವರಿಗೆ ಸ್ಪಷ್ಟವಾದ ಮಾಹಿತಿ ಇದೆ. ಹಣ ಎಲ್ಲಿಂದ ಬಂತು, ಅದು ಯಾರಿಗೆ ಸೇರಿದ್ದು, ಅದನ್ನು ಎಲ್ಲಿಗೆ ಕೊಂಡೊಯ್ಯಲಾಗುತ್ತಿತ್ತು ಎಂಬುದರ ಸಂಪೂರ್ಣ ವಿವರ ತಿಳಿದಿದೆ ಎಂದು ಹೇಳಿದ್ದಾರೆ. ಅವರನ್ನು ಪ್ರಶ್ನಿಸಿದರೆ ಹಣ ಯಾರದ್ದು ಎನ್ನುವುದು ತಿಳಿಯುತ್ತದೆ ಎಂದು ಹೇಳಿರುವ ಅವರು, ಹಲವು ಹಗರಣಗಳನ್ನು ನಾನು ಹೊರಗೆ ತರುತ್ತಿರುವುದರಿಂದ ನನ್ನ ಮೇಲೆ ಕೇಸ್ ಹಾಕಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
ಶೇಷಾದ್ರಿಪುರಂನಲ್ಲಿರುವ ಅಪಾರ್ಟ್ಮೆಂಟ್ ಒಂದರಿಂದ ಹಣ ತರಲಾಗುತಿತ್ತು. ಆ ಅಪಾರ್ಟ್ಮೆಂಟ್ನಲ್ಲಿ ಪ್ರಭಾವಿ ರಾಜಕಾರಣಿಯೊಬ್ಬರ ಮಗನಿದ್ದಾನೆ ಎಂದು ವಕೀಲ ಸಿದ್ಧಾರ್ಥ್ ವಿಚಾರಣೆ ವೇಳೆ ಹೇಳಿದ್ದಾರೆ ಎನ್ನಲಾಗಿದೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ