ಮೈಸೂರು: ಭ್ರಷ್ಟಾಚಾರ ಪ್ರಕರಣದಲ್ಲಿ ಸಿಬಿಐ ಕೋರ್ಟ್ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಕ್ಲೀನ್ ಚಿಟ್ ನೀಡಿದೆ. ಲಿಂಗಾಯತ ಸಮುದಾಯದ ಪ್ರಬಲ ನಾಯಕರಾಗಿರುವ ಯಡ್ಯೂರಪ್ಪ ಅವರಿಗೆ ನಂಜನಗೂಡು ವಿಧಾನ ಸಭೆ ಉಪ ಚುನಾವಣೆ ಪ್ರತಿಷ್ಠೆಯ ವಿಷಯವಾಗಿದೆ.
ಬಿಜೆಪಿ ರಾಜ್ಯಾಧ್ಯಕ್ಷರಾಗಿ ಯಡಿಯೂರಪ್ಪ ನೇಮಕವಾದ ಮೇಲೆ ಎದುರಿಸುತ್ತಿರುವ ಮೊದಲ ಉಪ ಚುನಾವಣೆ ಇದಾಗಿದ್ದು, ಬಿಎಸ್ ವೈ ಶಕ್ತಿ ಪ್ರದರ್ಶನಕ್ಕೆ ಇದೊಂದು ಪ್ರಬಲ ವೇದಿಕೆಯಾಗಿದೆ. ಸಿಬಿಐ ಕೋರ್ಟ್ ಕ್ಲೀನ್ ಚಿಟ್ ನೀಡಿದ ನಂತರ ಕಾಂಗ್ರೆಸ್ ಯಡಿಯೂರಪ್ಪ ವಿರುದ್ಧ ವಾಗ್ದಾಳಿ ನಡೆಸಲು ಸಾಧ್ಯಾವಗುತ್ತಿಲ್ಲ.
ಸಿಎಂ ಸಿದ್ದರಾಮಯ್ಯ ಮತ್ತು ಯಡಿಯೂರಪ್ಪ ಇಬ್ಬರಿಗೂ 2018 ರ ವಿಧಾನಸಭೆ ಚುನಾವಣೆ ಅಗ್ನಿ ಪರೀಕ್ಷೆಯಾಗಿದೆ. ಈಗ ಎದುರಾಗಲಿರುವ ನಂಜನಗೂಡು ವಿಧಾನ ಸಭೆ ಉಪ ಚುನಾವಣೆ 2018ರ ವಿಧಾನ ಸಭೆ ಚುನಾವಣೆಗೆ ದಿಕ್ಸೂಚಿ ಎಂದೇ ಪರಿಗಣಿಸಲಾಗಿದೆ.
ಅಹಿಂದ ಮೂಲಕ ಗುರುತಿಸಿಕೊಂಡಿರುವ ಸಿದ್ದರಾಮಯ್ಯಗೆ, ಬಹುತೇಕ ಹಿಂದುಳಿದ ಸಮುದಾಯದವರೇ ಇರುವ ನಂಜನಗೂಡು ವಿಧಾನಸಭೆ ಉಪ ಚುನಾವಣೆ ಗೆಲು ಪ್ರತಿಷ್ಠೆಯಾಗಿದೆ.
ಒಂದು ವೇಳೆ ನಂಜನಗೂಡು ಕ್ಷೇತ್ರ ಕಳೆದುಕೊಂಡರೇ ಸಿಎಂ ವಿರುದ್ಧ ಹೈ ಕಮಾಂಡ್ ಗೆ ದೂರು ರವಾನೆಯಾಗುತ್ತದೆ. ಇದರಿಂದ ಸಿದ್ದರಾಮಯ್ಯ ಪಕ್ಷದ ಮೇಲೆ ಹಾಗೂ ರಾಜ್ಯದ ಮೇಲಿನ ಹಿಡಿತ ಕಳೆದುಕೊಳ್ಳಲಿದ್ದಾರೆ.
ಒಂದು ವೇಳೆ ಬಿಜೆಪಿ ಉಪ ಚುನಾವಣೆಯಲ್ಲಿ ಗೆದ್ದರೇ ರಾಜ್ಯ ಬಿಜೆಪಿ ಘಟಕದ ಮೇಲೆ ಯಡ್ಯೂರಪ್ಪ ಹಿಡಿತ ಹೆಚ್ಚಾಗುತ್ತದೆ. ಜೊತೆಗೆ ಯಡಿಯೂರಪ್ಪ ವಿರುದ್ಧ ಕೆರಳಿರುವ ಪಕ್ಷದ ಹಿರಿಯ ನಾಯಕರು ಮೌನ ವಹಿಸುತ್ತಾರೆ.
ಅಲ್ಲದೇ ಕೋರ್ಟ್ ತೀರ್ಪು ಶ್ರೀನಿವಾಸ್ ಪ್ರಸಾದ್ ಬಿಜೆಪಿ ಸೇರಲು ಹಾದಿಯನ್ನು ಸುಗಮ ಮಾಡಿಕೊಟ್ಟಿದೆ. ಮೈಸೂರು ಭಾಗದಲ್ಲಿ ವೀರಶೈವ ಮತಗಳಲ್ಲದೇ ದಲಿತ ಹಾಗೂ ನಾಯಕ ಸಮುದಾಯದ ಮತಗಳನ್ನು ಸೆಳೆಯಲು ಸಹಾಯವಾಗುತ್ತದೆ.
ಶ್ರೀನಿವಾಸ್ ಪ್ರಸಾದ್ ಅಧಿಕೃತವಾಗಿ ಬಿಜೆಪಿ ಸೇರ್ಪಡೆಯಾದ ನಂತರ ಯಡಿಯೂರಪ್ಪ ಪಾಳೆಯದ ರಾಜಕೀಯ ಚಟುವಟಿಕೆಗಳು ನಂಜನಗೂಡಿಗೆ ಶಿಫ್ಟ್ ಆಗಲಿದೆ.
Advertisement