ಸಿದ್ದು ಸರ್ಕಾರ ಕಳೆದ 55 ವರ್ಷಗಳಲ್ಲೇ ಅತ್ಯಂತ ಕೆಟ್ಟ ಸರ್ಕಾರ: ಎಸ್.ಎಂ.ಕೃಷ್ಣ

ಇತ್ತೀಚಿಗಷ್ಟೆ ಬಿಜೆಪಿ ಸೇರಿದ ಮಾಜಿ ಮುಖ್ಯಮಂತ್ರಿ ಹಾಗೂ ಮಾಜಿ ವಿದೇಶಾಂಗ ಸಚಿವ ಎಸ್.ಎಂ.ಕೃಷ್ಣ ಅವರು ಸೋಮವಾರ....
ಎಸ್.ಎಂ.ಕೃಷ್ಣ
ಎಸ್.ಎಂ.ಕೃಷ್ಣ
Updated on
ಮೈಸೂರು: ಇತ್ತೀಚಿಗಷ್ಟೆ ಬಿಜೆಪಿ ಸೇರಿದ ಮಾಜಿ ಮುಖ್ಯಮಂತ್ರಿ ಹಾಗೂ ಮಾಜಿ ವಿದೇಶಾಂಗ ಸಚಿವ ಎಸ್.ಎಂ.ಕೃಷ್ಣ ಅವರು ಸೋಮವಾರ ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರ್ಕಾರ ಕಳೆದ 55 ವರ್ಷಗಳಲ್ಲೇ ಅತ್ಯಂತ ಕೆಟ್ಟ ಸರ್ಕಾರ ಎಂದು ಆರೋಪಿಸಿದ್ದಾರೆ.
ಉಪ ಚುನಾವಣೆಯಲ್ಲಿ ಬಿಜೆಪಿ ಪರ ಪ್ರಚಾರಕ್ಕೆ ತೆರಳಿರುವ ಕೃಷ್ಣ ಅವರು ಇಂದು ನಂಜನಗೂಡಿನಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು. ನಾನು ರಾಜಕೀಯ ಜೀವನದಲ್ಲಿ ಕೆ.ಸಿ. ರೆಡ್ಡಿಯಿಂದ ಕೆಂಗಲ್ ಹನುಮಂತಯ್ಯನವರವರೆಗೆ ಹಲವು ಮುಖ್ಯಮಂತ್ರಿಗಳನ್ನು ನೋಡಿದ್ದೇನೆ. ಆದರೆ ರಾಜ್ಯದಲ್ಲಿ ಈಗಿರುವ ಸರ್ಕಾರ ಅತ್ಯಂತ ಕೆಟ್ಟ ಸರ್ಕಾರ ಎಂದು ವಾಗ್ದಾಳಿ ನಡೆಸಿದರು.
ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಕೃಷ್ಣ, ರಾಜ್ಯದಲ್ಲಿ  ರಾಜಕೀಯ ಧ್ರುವೀಕರಣ ಆಗುತ್ತಿದೆ. ಅದರ ಭಾಗವಾಗಿಯೇ ನಾನು ಬಿಜೆಪಿ ಸೇರಿದ್ದೇನೆ. ಅಧಿಕಾರದ ಆಸೆಯಿಂದ ಬಿಜೆಪಿ ಸೇರಿಲ್ಲ ಮತ್ತು ಯಾವುದೇ ಬೇರೆ ರಾಜ್ಯದಿಂದ ರಾಜ್ಯಸಭೆಗೆ ಹೋಗಲ್ಲ ಎಂದು ಸ್ಪಷ್ಟಪಡಿಸಿದರು.
ರಾಜ್ಯ ಸರ್ಕಾರ ಎಂದರೆ ಬೆಳಗ್ಗೆ 11ರಿಂದ ಸಂಜೆ 7ಗಂಟೆಗೆ ಬಾಗಿಲು ಹಾಕಿ ತೆರೆಯುವುದಲ್ಲ. ಪ್ರಧಾನಿ ನರೇಂದ್ರ ಮೋದಿ ಅವರಂತೆ 24 ಗಂಟೆ ಕೆಲಸ ಮಾಡಬೇಕು. ಪ್ರಪಂಚದಲ್ಲೇ ಮೋದಿ ಒಬ್ಬ ಅತ್ಯುತ್ತಮ ನಾಯಕ . ಬಿಜೆಪಿಗೆ ಭವಿಷ್ಯದಲ್ಲಿ ಉತ್ತಮ ದಿನಗಳಿವೆ. ಸದ್ಯ ದೇಶದ ಇತರೆಡೆಗಳಲ್ಲಿ ಕಾಂಗ್ರೆಸ್‌ ಎಲ್ಲಿದೆ ಎಂದು ಹುಡುಕುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.
ಇದೇ ವೇಳೆ ಮಾಜಿ ಸಚಿವ ಅಂಬರೀಷ್‌ ಬಿಜೆಪಿ ಸೇರ್ಪಡೆ ಕುರಿತು ನನಗೆ ಮಾಹಿತಿ ಇಲ್ಲ ಎಂದು ಕೃಷ್ಣ ತಿಳಿಸಿದರು.
ಕೃಷ್ಣ ಅವರು ನಂಜನಗೂಡಿನಲ್ಲಿ ಶ್ರೀನಿವಾಸ್‌ ಪ್ರಸಾದ್‌ ಪರ ಪ್ರಚಾರ ಸಭೆಯಲ್ಲಿ ಇದೇ ಮೊದಲ ಬಾರಿಗೆ ಪಾಲ್ಗೊಂಡು ಕಾಂಗ್ರೆಸ್‌ ವಿರುದ್ಧ  ವಾಗ್ದಾಳಿ ನಡೆಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com