ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ನಡುವಿನ ಡೈರಿವಾರ್ ಮತ್ತಷ್ಟು ತಾರಕಕ್ಕೇರಿದೆ.
1,800 ಕೋಟಿ ರು. ವೆಚ್ಚದ ಸ್ಟೀಲ್ ಬ್ರಿಡ್ಜ್ ಗಾಗಿ ವಿಧಾನ ಪರಿಷತ್ ಸದಸ್ಯ ಕೆ. ಗೋವಿಂದರಾಜ್ ಅವರು ರು. 65 ಕೋಟಿ ಹಣವನ್ನು ನೇರವಾಗಿ ಸಿದ್ದರಾಮಯ್ಯ ಅವರ ಕುಟುಂಬಕ್ಕೆ ತಲುಪಿಸಿದ್ದಾರೆ ಎಂದು ಬಿ.ಎಸ್. ಯಡಿಯೂರಪ್ಪ ಮತ್ತೊಂದು ಬಾಂಬ್ ಸಿಡಿಸಿದ್ದಾರೆ.
ಸಿದ್ದರಾಮಯ್ಯ ಕುಟುಂಬಕ್ಕೆ ರು. 65 ಕೋಟಿ ಹಣವನ್ನು ತಾವೇ ಖುದ್ದು ನೀಡಿರುವುದಾಗಿ ಗೋವಿಂದರಾಜ್ ನಮೂದಿಸಿರುವುದು ಆದಾಯ ತೆರಿಗೆ ಇಲಾಖೆ (ಐ.ಟಿ) ಅಧಿಕಾರಿಗಳು ವಶಪಡಿಸಿಕೊಂಡಿರುವ ಡೈರಿಯಲ್ಲಿದೆ ಎಂದು ಹೇಳಿದ್ದಾರೆ.
ಸಿದ್ದರಾಮಯ್ಯ ವಿರುದ್ದ ಮತ್ತಷ್ಟು ದಾಖಲೆಗಳನ್ನು ಬಹಿರಂಗಗೊಳಿಸುವುದಾಗಿ ಈ ಹಿಂದೆ ಯಡಿಯೂರಪ್ಪ ಬೆದರಿಕೆ ಹಾಕಿದ್ದರು. ಮುಂದಿನ ವಿಧಾನಸಭೆ ಚುನಾವಣೆಗೆ ಡೈರಿ ಪ್ರಕರಣವನ್ನು ಜೀವಂತವಾಗಿಡುವುದಾಗಿ, ಅದರಿಂದ ಸಿಎಂ ಸಿದ್ದರಾಮಯ್ಯ ಬಚಾವಾಗಲು ಸಾಧ್ಯವಿಲ್ಲ ಎಂದು ಬಿಎಸ್ ವೈ ಹೇಳಿದ್ದರು.
ಹೈಕಮಾಂಡ್ ಗೆ ಕಪ್ಪ ನೀಡಿದ ಪ್ರಕರಣದಲ್ಲಿ ಬಿಜೆಪಿ- ಕಾಂಗ್ರೆಸ್ ಕೆಸರೆರಚಾಟದ ಬಗ್ಗೆ ಮಾಧ್ಯಮ ಪ್ರತಿನಿಧಿಗಳು ಪ್ರಶ್ನಿಸಿದಾಗ ಸಿ ಎಂ ಸಿದ್ದರಾಮಯ್ಯ ಸಿಟ್ಟಿಗೆದ್ದರು. ಪದೇ ಪದೇ ಯಡಿಯೂರಪ್ಪ ಅಂತಾ ಜಪಿಸುತ್ತೀರಲ್ಲಾ ನಿಮಗೆ ಬೇರೆ ಕೆಲಸ ಇಲ್ವಾ, ಅವರ ವಿರುದ್ಧದ ಮೇಲ್ಮನವಿ ಬಗ್ಗೆ ಕಾನೂನು ಸಚಿವರನ್ನು ಕೇಳಿ ನನ್ನನ್ನು ಏಕೆ ಕೇಳುತ್ತೀರಿ ಎಂದು ಗದರಿದರು.
Advertisement