ಗೃಹಖಾತೆಗೆ ರಮಾನಾಥ ರೈ ಹೆಸರು: ಸಂಪುಟದ ಹಿರಿಯ ಸಚಿವರಲ್ಲಿ ಹೊತ್ತಿಸಿದೆ ಬೆಂಕಿ

ಗೃಹಖಾತೆಗೆ ಸಚಿವ ರಾಮಲಿಂಗಾ ರೆಡ್ಡಿ, ಸಂತೋಷ್ ಲಾಡ್, ಮತ್ತು ಕೆ.ಜೆ ಜಾರ್ಜ್ ನಂತರ ಅರಣ್ಯ ಸಚಿವ ರಮಾನಾಥ ರೈ ಅವರ ಹೆಸರು ಕೇಳಿ ಬರುತ್ತಿದೆ...
ರಮಾನಾಥ ರೈ
ರಮಾನಾಥ ರೈ
Updated on
ಬೆಂಗಳೂರು: ಗೃಹಖಾತೆಗೆ ಸಚಿವ ರಾಮಲಿಂಗಾ ರೆಡ್ಡಿ, ಸಂತೋಷ್ ಲಾಡ್, ಮತ್ತು ಕೆ.ಜೆ ಜಾರ್ಜ್ ನಂತರ ಅರಣ್ಯ ಸಚಿವ ರಮಾನಾಥ ರೈ ಅವರ ಹೆಸರು ಕೇಳಿ ಬರುತ್ತಿದೆ. ಜಿ. ಪರಮೇಶ್ವರ್ ರಾಜಿನಾಮೆ ನಂತರ ತೆರವಾಗಿರುವ ಗೃಹಖಾತೆ ಹೊಣೆಗಾರಿಕೆ ಸಂಬಂಧ ಪ್ರತಿದಿನ ಹಲವು ಹೆಸರುಗಳು ಸುತ್ತುತ್ತಿವೆ.
ಮಂಗಳವಾರ ಸಂಜೆ ಈ ಸಂಬಂಧ ಸಚಿವ ರಮಾನಾಥ ರೈ ಅವರ ಜೊತೆ ಸಿಎಂ ಸಿದ್ದರಾಮಯ್ಯ ಮಾತುಕತೆ ನಡೆಸಿದ್ದು, ಹೈಕಮಾಂಡ್ ಒಪ್ಪಿಗೆ ಸಿಕ್ಕ ನಂತರ ಶೀಘ್ರವೇ ರೈಗೆ ಹೊಣೆಗಾರಿಕೆ ನೀಡಲಿದ್ದಾರೆ.  ಶೀಘ್ರವೇ ಸಿಎಂ ಸಿದ್ದರಾಮಯ್ಯ ದೆಹಲಿಯಲ್ಲಿ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿ ಈ ಸಂಬಂಧ ಒಪ್ಪಿಗೆ ಪಡೆಯುವ ಸಾಧ್ಯತೆಯಿದೆ.
ಒಂದು ವೇಳೆ ಯಾವುದೇ ಜವಾಬ್ದಾರಿ ನೀಡಿದರೂ ಅದನ್ನು ತೆಗೆದುಕೊಳ್ಳಲು ನಾನು ಸಿದ್ಧನಿದ್ದೇನೆ, ನನಗೆ ವಿವಿಧ ಖಾತೆಗಳನ್ನು ನಿಬಾಯಿಸಿರುವ ಅನುಭವವಿದೆ ಎಂದು ರಮಾನಾಥ ರೈ ಹೇಳಿದ್ದಾರೆ. 
ಆದರೆ  ರಮಾನಾಥ ರೈಗೆ ಗೃಹ ಖಾತೆ ನೀಡುವ ಸಂಬಂಧ ಸಿಎಂ ಸಿದ್ದರಾಮಯ್ಯ ಅವರ ಸಂಪುಟದಲ್ಲಿರುವ ಹಿರಿಯ ಸಚಿವರು ತೀವ್ರ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.  ರೈ ಅವರಿಗೆ ಗೃಹ ಖಾತೆ ನೀಡುವ ಸಂಬಂಧ ಆಕ್ರೋಶ ವ್ಯಕ್ತ ಪಡಿಸಿರುವ ಬಿಜೆಪಿ ಗೃಹಖಾತೆ ಹೊಣೆಯನ್ನು ಯೋಗ್ಯವಲ್ಲದ ವ್ಯಕ್ತಿಗೆ ನೀಡಲಾಗುತ್ತಿದೆ ಎಂದು ಟೀಕಿಸಿದೆ.
ಒಂದು ಜಿಲ್ಲೆಯನ್ನು ಸರಿಯಾಗಿ ನಿರ್ವಹಿಸಲಾಗದ ರಮಾನಾಥ ರೈ, ಇಡೀ ರಾಜ್ಯದ ಕಾನೂನು ಸುವ್ಯವಸ್ಥೆಯನ್ನು ಹೇಗೆ ನಿರ್ವಹಿಸುತ್ತಾರೆ ಎಂದು ವಿಧಾನಸಭೆ ವಿಪಕ್ಷ ನಾಯಕ  ಜಗದೀಶ್ ಶೆಟ್ಟರ್ ಪ್ರಶ್ನಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com