ವಿಧಾನಸಭೆ ಚುನಾವಣೆ 2018: ಪಕ್ಷದ ಬಲವರ್ಧನೆಗೆ ಜೆಡಿಎಸ್ ಮುಂದು; ವೀಕ್ಷಕರ ನೇಮಕ

ಮುಂಬರಲಿರುವ ವಿಧಾನಸಭಾ ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸುವ ಸಲುವಾಗಿ ಕೆಳ ಹಂತದಲ್ಲಿ ಪಕ್ಷವನ್ನು ಬಲಪಡಿಸಲು ಜಾತ್ಯತೀತ ಜನತಾ ದಳ 60 ..
ಎಚ್.ಡಿ. ಕುಮಾರಸ್ವಾಮಿ
ಎಚ್.ಡಿ. ಕುಮಾರಸ್ವಾಮಿ
ಬೆಂಗಳೂರು: ಮುಂಬರಲಿರುವ ವಿಧಾನಸಭಾ ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸುವ ಸಲುವಾಗಿ  ಕೆಳ ಹಂತದಲ್ಲಿ ಪಕ್ಷವನ್ನು ಬಲಪಡಿಸಲು ಜಾತ್ಯತೀತ ಜನತಾ ದಳ 60 ವೀಕ್ಷಕರನ್ನು  ಸೋಮವಾರ ನೇಮಿಸಿದೆ. ಜೆಡಿಎಸ್‌ ರಾಜ್ಯ ಅಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಮಾಧ್ಯಮ ಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು. 
ಶೇಷಾದ್ರಿಪುರಂನಲ್ಲಿರುವ ಪಕ್ಷದ ಕಚೇರಿ ಜೆಪಿ ಭವನದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಪ್ರತಿಯೊಂದು ಜಿಲ್ಲೆಗೆ ತಲಾ ಇಬ್ಬರು ವೀಕ್ಷಕರು ನೇಮಿಸಲಾಗಿದ್ದು, ಅವರು ಈ ತಿಂಗಳ 30 ರೊಳಗೆ ಜಿಲ್ಲೆ, ತಾಲ್ಲೂಕು ಮತ್ತು ಗ್ರಾಮ ಪಂಚಾಯ್ತಿ ಮಟ್ಟದ ಪದಾಧಿಕಾರಿಗಳನ್ನು ನೇಮಿಸಲಿದ್ದಾರೆ ಎಂದು ಅವರು ಹೇಳಿದರು. ಪಕ್ಷದ ಪ್ರಚಾರ ಸಮಿತಿ ರಚಿಸಲಾಗುತ್ತಿದೆ.  ಸಮಿತಿಯಲ್ಲಿ ಅಧ್ಯಕ್ಷ ಮತ್ತು 5 ಜನ  ಸದಸ್ಯರಿರುತ್ತಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವೈಫಲ್ಯವನ್ನು  ಜನರಿಗೆ ಮುಟ್ಟಿಸುವ ಕೆಲಸ ಈ  ಸಮಿತಿ ಮಾಡಲಿದೆ ಎಂದರು.
ಜಿಲ್ಲೆ, ತಾಲೂಕು, ಗ್ರಾ.ಪಂ ವ್ಯಾಪ್ತಿಯಲ್ಲಿ ಪದಾಧಿಕಾರಿಗಳ ನೇಮಕಗೊಳಿಸಲು ವೀಕ್ಷಕರಿಗೆ ಹೆಚ್ಚಿನ ಜವಾಬ್ದಾರಿ ನೀಡಲಾಗಿದೆ. ಬೂತ್ ಮಟ್ಟದಲ್ಲಿ ಪದಾಧಿಕಾರಿಗಳ ನೇಮಕದ ಜವಾಬ್ದಾರಿಯನ್ನು ಅವರು ನಿರ್ವಹಿಸಲಿದ್ದಾರೆ.
ಜೆಡಿಎಸ್‌ನಲ್ಲಿ ಅಪ್ಪ- ಮಕ್ಕಳ ಪಕ್ಷ ಎಂಬ ಅಪವಾದ ತೊಡೆದು ಹಾಕಲು ಈ ಹೊಸ ವ್ಯವಸ್ಥೆ ರೂಪಿಸಲಾಗಿದೆ. ಜತೆಗೆ ಪಕ್ಷದ ಕೆಲವರು ಬೇರೆ ಬೇರೆ ಪಕ್ಷಗಳಿಗೆ ವಲಸೆ ಹೋಗಿದ್ದಾರೆ. ಹೀಗಾಗಿ ಎರಡನೇ ಹಂತದ ನಾಯಕರನ್ನು ಬೆಳೆಸಬೇಕು ಎಂದು ಅಧಿಕಾರ ವಿಕೇಂದ್ರೀಕರಣ ಮಾಡಲಾಗಿದೆ ಎಂದರು.  150 ಅಭ್ಯರ್ಥಿಗಳ ಪಟ್ಟಿ ಸಿದ್ಧಪಡಿಸಿ ಈಗಾಗಲೇ ರಾಷ್ಟ್ರೀಯ ಅಧ್ಯಕ್ಷರಿಗೆ ರವಾನಿಸಿದ್ದೇವೆ. ಹಲವಾರು‌ ಕ್ಷೇತ್ರಗಳಲ್ಲಿ ಪದಾಧಿಕಾರಿಗಳ ನೇಮಕ ಆಗಿಲ್ಲದ ಕಾರಣ ಅಭ್ಯರ್ಥಿಗಳ ಘೋಷಣೆ ವಿಳಂಬವಾಗಿದೆ  ಎಲ್ಲಾ ಪದಾಧಿಕಾರಿಗಳು ಒಪ್ಪಿದ ಮೇಲೆ ಪಟ್ಟಿಯನ್ನು ಬಿಡುಗಡೆ ಮಾಡಲಾಗುವುದು ಎಂದು ಅವರು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com