ರಾಜಕೀಯ
ಎಸಿಬಿ ಸಿಎಂ ವಿರುದ್ಧ ಎಫ್ಐಆರ್ ದಾಖಲಿಸದಿದ್ದರೆ ಧರಣಿ ಮಾಡುತ್ತೇನೆ: ಪುಟ್ಟಸ್ವಾಮಿ ಎಚ್ಚರಿಕೆ
ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ) ರಾಜಮಹಲ್ ವಿಲಾಸ್ ಬಡಾವಣೆ ಅಕ್ರಮ ಡಿನೋಟಿಫೈ ಪ್ರಕರಣ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ....
ಬೆಂಗಳೂರು: ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ) ರಾಜಮಹಲ್ ವಿಲಾಸ್ ಬಡಾವಣೆ ಅಕ್ರಮ ಡಿನೋಟಿಫೈ ಪ್ರಕರಣ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಎಫ್ಐಆರ್ ದಾಖಲಿಸದಿದ್ದರೆ ಎಸಿಬಿ ಕಚೇರಿ ಮುಂದೆ ಧರಣಿ ನಡೆಸುವುದಾಗಿ ಬಿಜೆಪಿ ನಾಯಕ ಬಿಜೆ ಪುಟ್ಟಸ್ವಾಮಿ ಅವರು ಮಂಗಳವಾರ ಎಚ್ಚರಿಕೆ ನೀಡಿದ್ದಾರೆ.
ವಿಧಾನ ಪರಿಷತ್ತ್ ಸದಸ್ಯ ಹಾಗೂ ಬಿಜೆಪಿ ಹಿಂದೂಳಿದ ವರ್ಗಗಳ ಮೋರ್ಚಾ ಅಧ್ಯಕ್ಷರಾಗಿರುವ ಪುಟ್ಟಸ್ವಾಮಿ ಅವರು, ಸಿದ್ದರಾಮಯ್ಯ ಅವರು ಭೂಪಸಂದ್ರದ ಬಳಿ 300 ಕೋಟಿ ರು. ಬೆಲೆ ಬಾಳುವ ಜಾಗವನ್ನು ಅಕ್ರಮವಾಗಿ ಡಿನೋಟಿಫಿಕೇಶನ್ ಮಾಡಿದ್ದಾರೆ ಎಂದು ಆರೋಪಿಸಿ ಎಸಿಬಿಗೆ ದೂರು ನೀಡಿದ್ದಾರೆ.
ಒಂದು ವಾರದವರೆಗೆ ಕಾಯುತ್ತೇನೆ. ಒಂದು ವೇಳೆ ಮುಂದಿನ ವಾರದಲ್ಲಿ ಎಸಿಬಿ ಸಿಎಂ ವಿರುದ್ಧ ಎಫ್ಐಆರ್ ದಾಖಲಿಸದಿದ್ದರೆ ಎಸಿಬಿ ಕಚೇರಿ ಮುಂದೆ ಧರಣಿ ಕುಳಿತುಕೊಳ್ಳುತ್ತೇನೆ ಎಂದು ಪುಟ್ಟಸ್ವಾಮಿ ಎಚ್ಚರಿಕೆ ನೀಡಿದ್ದಾರೆ. ಅಲ್ಲದೆ ಈ ಸಂಬಂಧ ಸಿಎಂ ವಿರುದ್ಧ ಕೋರ್ಟ್ ನಲ್ಲೂ ಕೇಸ್ ದಾಖಲಿಸುವುದಾಗಿ ತಿಳಿಸಿದ್ದಾರೆ.