ಮೈಸೂರು: ಇಲ್ಲಿನ ಮಾವಿನಹಳ್ಳಿಯಲ್ಲಿ ಪಕ್ಷದ ಮುಖಂಡರೊಬ್ಬರ ಮನೆಯಲ್ಲಿ ಮಧ್ಯಾಹ್ನ ಊಟಕ್ಕೆ ಕುಳಿತಿದ್ದಾಗ ಪ್ಲಾಸ್ಟಿಕ್ ಕುರ್ಚಿಯಿಂದ ಬಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ತಲೆಗೆ ಸ್ವಲ್ಪ ಏಟಾಗಿದೆ. ಕೂಡಲೇ ಅವರು ಸಹಜ ಸ್ಥಿತಿಗೆ ಬಂದು ತಮ್ಮ ಚುನಾವಣಾ ಪ್ರಚಾರವನ್ನು ಆರಂಭಿಸಿದರು.
ತಮ್ಮ ಸ್ವಕ್ಷೇತ್ರ ಚಾಮುಂಡೇಶ್ವರಿಯ ದರಿಪುರ, ಬರದನಾಪುರಗಳಲ್ಲಿ ಚುನಾವಣಾ ಪ್ರಚಾರ ನಡೆಸಿ ನಂತರ ನಿನ್ನೆ ಮಧ್ಯಾಹ್ನ ಮಾವಿನಹಳ್ಳಿಯಲ್ಲಿ ಪಕ್ಷದ ಮುಖಂಡರೊಬ್ಬರ ಮನೆಗೆ ಊಟಕ್ಕೆ ತೆರಳಿದ್ದರು. ಅವರು ಮಾಜಿ ಶಾಸಕ ಸತ್ಯನಾರಾಯಣ ಮತ್ತು ವಕೀಲ ಸ್ನೇಹಿತ ಮಾವಿನಹಳ್ಳಿ ಸಿದ್ದೇಗೌಡ ಜೊತೆಗೆ ಊಟಕ್ಕೆ ಕುಳಿತಿದ್ದರು. ಮುಖ್ಯಮಂತ್ರಿಯವರು ಕುಳಿತಿದ್ದ ಕುರ್ಚಿ ಆಯತಪ್ಪಿ ಕೆಳಗೆ ಬಿದ್ದಿತು. ಅದೃಷ್ಟವಶಾತ್ ಮುಖ್ಯಮಂತ್ರಿಯವರಿಗೆ ಗಾಯಗಳಾಗಲಿಲ್ಲ.
ತಕ್ಷಣವೇ ಭದ್ರತಾ ಸಿಬ್ಬಂದಿ ನೆರವಿಗೆ ಧಾವಿಸಿದರು. ಪಕ್ಷದ ಕಾರ್ಯಕರ್ತರಿಗೆ ಒಂದು ಬಾರಿ ಗಾಬರಿಯಾಯಿತು. ವೃತ್ತಿಯಲ್ಲಿ ವೈದ್ಯರಾಗಿರುವ ಸಿದ್ದರಾಮಯ್ಯನವರ ಪುತ್ರ ಯತೀಂದ್ರ ಸುದ್ದಿ ತಿಳಿದು ಕೂಡಲೇ ಸ್ಥಳಕ್ಕೆ ಧಾವಿಸಿ ಬಂದರು. ತಲೆಯಲ್ಲಿ ಸ್ವಲ್ಪ ಗಾಯವಾಗಿದೆಯಷ್ಟೆ ಎಂದು ಪರೀಕ್ಷಿಸಿ ಹೇಳಿದರು.
ಸ್ವಲ್ಪವೇ ಹೊತ್ತಿನಲ್ಲಿ ಮುಖ್ಯಮಂತ್ರಿಯವರು ಸುಧಾರಿಸಿಕೊಂಡರು. ಊಟ ಮುಗಿಸಿ ಮತ್ತೆ ಚುನಾವಣಾ ಪ್ರಚಾರ ಆರಂಭಿಸಿದರು. ನಂತರ ಬೆಂಗಳೂರಿಗೆ ವಿಮಾನದಲ್ಲಿ ತೆರಳಿದರು.
Advertisement