ಗದಗ: ಕಾಂಗ್ರೆಸ್ ವಿರುದ್ಧ ವಾಗ್ದಾಳಿ ಮುಂದುವರಿಸಿರುವ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ, ಸಿದ್ದರಾಮಯ್ಯ ಸರ್ಕಾರ ಅತ್ಯಂತ ಭ್ರಷ್ಟ ಆಡಳಿತ ನಡೆಸಿರುವ ಸರ್ಕಾರ ಎಂದು ಟೀಕಿಸಿದ್ದಾರೆ.
ಮುಷ್ಠಿ ಧಾನ್ಯ ಸಂಗ್ರಹ ಅಭಿಯಾನದ ಮುಕ್ತಾಯದ ಅಂಗವಾಗಿ ರ್ಯಾಲಿಯನ್ನುದ್ದೇಶಿಸಿ ನಿನ್ನೆ ಗದಗ ಜಿಲ್ಲೆಯ ಅಬ್ಬಿಗೇರಿ ಗ್ರಾಮದಲ್ಲಿ ಮಾತನಾಡಿದ ಅವರು, ಕಳೆದ ಐದು ವರ್ಷಗಳಲ್ಲಿ ಕರ್ನಾಟಕದಲ್ಲಿ 3,500ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ ಕೃಷಿ ಸಮುದಾಯದವರ ಸಮಸ್ಯೆಗಳನ್ನು ಬಗೆಹರಿಸಲು ಸಿದ್ದರಾಮಯ್ಯ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಕಾಂಗ್ರೆಸ್ ಆಡಳಿತದಲ್ಲಿ ರಾಜ್ಯದಲ್ಲಿ ಅಭಿವೃದ್ಧಿ ಕೆಲಸಗಳು ಕುಂಠಿತವಾಗಿದ್ದು ಭ್ರಷ್ಟಾಚಾರ ತಾರಕಕ್ಕೇರಿದೆ ಎಂದರು.
ಅಸಮರ್ಥ ಕಾಂಗ್ರೆಸ್ ಪಕ್ಷವನ್ನು ಅಧಿಕಾರದಿಂದ ತೊಲಗಿಸಿ ಎಂದು ಮತದಾರರಿಗೆ ಕರೆ ನೀಡಿದ ಅವರು, ಉತ್ತಮ ದಿನಗಳಿಗಾಗಿ ಬಿಜೆಪಿಗೆ ಮತ ನೀಡಿ ಎಂದು ಮನವಿ ಮಾಡಿದರು. ಸಿದ್ದರಾಮಯ್ಯನವರು ನಕಲಿ ಸಮಾಜವಾದಿ ಎಂದು ಬಣ್ಣಿಸಿದ ಅಮಿತ್ ಶಾ, ಅವರ ದುಬಾರಿ ಹುಬ್ಲೊಟ್ ವಾಚು ಖರೀದಿ ಬಗ್ಗೆ ಪ್ರಸ್ತಾಪಿಸಿದರು. ಮುಖ್ಯಮಂತ್ರಿಗಳು 40 ಲಕ್ಷ ರೂಪಾಯಿ ಬೆಲೆಬಾಳುವ ವಾಚನ್ನು ಧರಿಸುತ್ತಾರೆಂದರೆ ಅವರು ಎಂತಹ ಸಮಾಜವಾದಿ, ಅವರು ಏನು ಸಾಮಾಜಿಕ ನ್ಯಾಯ ತೋರಿಸಬಹುದು ಎಂದು ಕೇಳಿದರು.
Advertisement