ಬೆಂಗಳೂರು: ವಿಧಾನಸಭೆ ಚುನಾವಣೆಗಾಗಿ ಭರ್ಜರಿ ಪ್ರಚಾರ ತಂತ್ರಗಳ ಮೂಲಕ ಪಕ್ಷದ ಅಭ್ಯರ್ಥಿಗಳ ಪರ ಮತದಾರರನ್ನು ಸೆಳೆಯಲು ಕಾಂಗ್ರೆಸ್ ಕಾರ್ಯತಂತ್ರ ರೂಪಿಸಿದೆ.
ರಾಷ್ಟ್ರೀಯ ನಾಯಕರ ಜೊತೆ ಕ್ರಿಕೆಟ್, ಸಿನಿಮಾ ತಾರೆಯರನ್ನು ‘ಸ್ಟಾರ್’ ಪ್ರಚಾರಕರನ್ನಾಗಿ ಬಳಸಿಕೊಂಡು ಜನಾಕರ್ಷಣೆಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಕೆಪಿಸಿಸಿ ತೀರ್ಮಾನಿಸಿದೆ.
ಕೇಂದ್ರದ ಮಾಜಿ ಸಚಿವ ಗುಲಾಂ ನಬಿ ಆಜಾದ್, ಸಂಸತ್ ಸದಸ್ಯ ಜೋತಿರಾದಿತ್ಯ ಸಿಂಧಿಯಾ, ಕ್ರಿಕೆಟ್ ಕ್ಷೇತ್ರದಿಂದ ಬಂದು ರಾಜಕಾರಣಿಗಳಾಗಿ ಬದಲಾಗಿರುವ ಅಜರುದ್ದೀನ್, ನವಜೋತ್ ಸಿಂಗ್ ಸಿಧು ಕಾಂಗ್ರೆಸ್ ಪರ ಪ್ರಚಾರಕ್ಕೆ ರಾಜ್ಯಕ್ಕೆ ಬರಲಿದ್ದಾರೆ.
ಬಣ್ಣದ ಲೋಕದಲ್ಲಿ ಅತಿ ಹೆಚ್ಚು ಪ್ರಸಿದ್ದಿ ಪಡೆದು ರಾಜಕೀಯ ಕ್ಷೇತ್ರಕ್ಕೆ ಬಂದಿರುವ ಖುಷ್ಬೂ ಮತ್ತು ನಗ್ಮಾ ಕೂಡ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರಕ್ಕೆ ಬರಲಿದ್ದಾರೆ ಎನ್ನಲಾಗಿದೆ.
ಮೋದಿ ಬರುವ ದಿನಗಳಲ್ಲೇ ಸ್ಟಾರ್ ಪ್ರಚಾರಕರನ್ನು ಬಳಸಿಕೊಂಡು ಅವರ ಪ್ರಚಾರ ಶೈಲಿಗೆ ಎದಿರೇಟು ನೀಡಲು ಕಾಂಗ್ರೆಸ್ ಉದ್ದೇಶಿಸಿದೆ.