ಮೋದಿ ಸಮಾವೇಶಗಳಲ್ಲಿ ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ ಬಿಎಸ್ ಯಡಿಯೂರಪ್ಪ ಪಾಲ್ಗೊಳ್ಳುತ್ತಿಲ್ಲ

ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರಮೋದಿ ರಾಜ್ಯದಲ್ಲಿ ಕೈಗೊಳ್ಳುವ ಸಮಾವೇಶಗಳಲ್ಲಿ ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ ಬಿ.ಎಸ್.ಯಡಿಯೂರಪ್ಪ ಪಾಲ್ಗೊಳ್ಳುತ್ತಿಲ್ಲ.
ಬಿ.ಎಸ್.ಯಡಿಯೂರಪ್ಪ
ಬಿ.ಎಸ್.ಯಡಿಯೂರಪ್ಪ

ಬೆಂಗಳೂರು :ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರಮೋದಿ ರಾಜ್ಯದಲ್ಲಿ ಕೈಗೊಳ್ಳುವ ಸಮಾವೇಶಗಳಲ್ಲಿ ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ ಬಿ.ಎಸ್.ಯಡಿಯೂರಪ್ಪ ಪಾಲ್ಗೊಳ್ಳುತ್ತಿಲ್ಲ.

ಬಿಜೆಪಿ ರಾಜ್ಯಾಧ್ಯಕ್ಷರು ಆಗಿರುವ ಬಿ. ಎಸ್ .ಯಡಿಯೂರಪ್ಪ ಅವರನ್ನು ಹೊರಗಿಡುವ ನಿರ್ಧಾರ ತಾಳಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ  ತಮ್ಮ ಸ್ವಂತ ವರ್ಚಸ್ಸಿನ ಆಧಾರದ  ಮೇಲೆ   ಪ್ರವಾಸ ಮಾಡುತ್ತಿರುವುದು ತೀವ್ರ ಕುತೂಹಲ ಕೆರಳಿಸಿದೆ.

 ಪ್ರಧಾನಿ ನರೇಂದ್ರಮೋದಿ ಮೇ 1 ರಿಂದ 10 ರವರೆಗೂ ರಾಜ್ಯಾದ್ಯಂತ 15 ಸಮಾವೇಶಗಳನ್ನು ನಡೆಸಲಿದ್ದಾರೆ. ಆದರೆ. ಈ ಸಮಾವೇಶಗಳಲ್ಲಿ ಮೋದಿ ಅವರೊಂದಿಗೆ ಯಡಿಯೂರಪ್ಪ ವೇದಿಕೆ ಹಂಚಿಕೊಳ್ಳುವಂತಿಲ್ಲ.

ವರುಣಾ ಕ್ಷೇತ್ರದಲ್ಲಿ  ಪುತ್ರ ವಿಜಯೇಂದ್ರ ಅವರಿಗೆ ಟಿಕೆಟ್  ದೊರೆಯದ ಹಿನ್ನೆಲೆಯಲ್ಲಿ ಯಡಿಯೂರಪ್ಪ ಹಾಗೂ  ಅಮಿತ್ ಶಾ ನಡುವೆ ಮನಸ್ತಾಪ ಉಂಟಾಗಿದೆ ಎಂಬಂತಹ ಊಹಾಪೋಹಗಳು ಹರಿದಾಡುತ್ತಿವೆ.

ವಿಧಾನಸಭಾ ಚುನಾವಣೆಗೆ ಇನ್ನೂ ಎರಡು ವಾರಕ್ಕಿಂತಲೂ ಕಡಿಮೆ ದಿನಗಳು ಬಾಕಿ ಇರುವಂತೆ ಎಲ್ಲಾ ಸ್ಟಾರ್ ಪ್ರಚಾರಕರಾದ  ನರೇಂದ್ರಮೋದಿ, ಅಮಿತ್ ಶಾ, ಯಡಿಯೂರಪ್ಪ ಎಲ್ಲಾ 224  ಕ್ಷೇತ್ರಗಳಲ್ಲಿ ಪ್ರಚಾರ ನಡೆಸಲಿದ್ದಾರೆ.

ಮೋದಿ, ಶಾ, ಯಡಿಯೂರಪ್ಪ ಒಂದೇ ಸ್ಥಳದಲ್ಲಿ ಭಾಷಣ ಮಾಡುವಂತಿಲ್ಲ. ಎಲ್ಲಾ ಸ್ಟಾರ್ ಪ್ರಚಾರಕರಿಂದಲೂ  ಸಾಧ್ಯವಾದಷ್ಟು ಗರಿಷ್ಠ ಅನುಕೂಲ ಪಡೆಯುವ ನಿಟ್ಟಿನಲ್ಲಿ  ಪ್ರಚಾರ ಕಾರ್ಯಗಳನ್ನು ನಡೆಸಲಾಗುತ್ತಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

 ರಾಜ್ಯದಲ್ಲಿನ ಇತ್ತೀಚಿನ ಕೆಲ ಬೆಳವಣಿಗೆಗಳು ಬಿಜೆಪಿ ವರಿಷ್ಠರಿಗೆ ಇಷ್ಟವಾಗಿಲ್ಲ. ವರುಣಾದಲ್ಲಿ ವಿಜಯೇಂದ್ರ ಅವರಿಗೆ ಟಿಕೆಟ್ ಕೈ ತಪ್ಪಿದ ಹಿನ್ನೆಲೆಯಲ್ಲಿ ಪ್ರತಿಭಟನೆ ನಡೆದದ್ದು  ಹಾಗೂ ಚಿತ್ರದುರ್ಗದಲ್ಲಿ  ಜನಾರ್ಧನ ರೆಡ್ಡಿ ವೇದಿಕೆಯಲ್ಲಿ ಪಾಲ್ಗೊಂಡದ್ದು  ಅಮಿತ್ ಶಾ ಅವರಿಗೆ ಮುಜುಗರ ಉಂಟುಮಾಡಿತ್ತು.

 ಇದರಿಂದ ಪಕ್ಷಕ್ಕೆ ಆಗುತ್ತಿದ್ದ  ಧಕ್ಕೆಯನ್ನು ನಿಯಂತ್ರಿಸಿ,  10 ರಿಂದ 15 ಸೀಟುಗಳಲ್ಲಿ ಹೆಚ್ಚು ಗೆಲ್ಲಲು ಅನುಕೂಲವಾಗಲಿದೆ ಎಂದು ರಾಜಕೀಯ ವಿಶ್ಲೇಷಕ ಸಂದೀಪ್ ಶಾಸ್ತ್ರೀ ಹೇಳುತ್ತಾರೆ.

ಚಾಮರಾಜನಗರದಲ್ಲಿ ಮೇ 1 ರಂದು ನಡೆಯುವ ಮೋದಿ ಸಮಾವೇಶದಲ್ಲಿ ಯಡಿಯೂರಪ್ಪ ಪಾಲ್ಗೊಳ್ಳುವ ಸಾಧ್ಯತೆ ಇದೆ. ಉಳಿದ ಸಮಾವೇಶಗಳಲ್ಲಿ ಪಾಲ್ಗೊಳ್ಳುತ್ತಿಲ್ಲ. ಯಡಿಯೂರಪ್ಪ  ಎರಡು ವಾರಗಳಲ್ಲಿ  100 ಕ್ಷೇತ್ರಗಳಲ್ಲಿ ಹಾಗೂ ಇತರ ನಾಯಕರು 120 ಕ್ಷೇತ್ರಗಳಲ್ಲಿ ಪ್ರಚಾರ ನಡೆಸಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com