ಕುಮಾರಸ್ವಾಮಿಯವರು 'ಯೂ ಟರ್ನ್' ಮುಖ್ಯಮಂತ್ರಿ: ಬಿಜೆಪಿ ಲೇವಡಿ

ಐಎಎಸ್ ಅಧಿಕಾರಿ ಡಿ ಕೆ ರವಿ ಅವರ ನಿಗೂಢ ಸಾವು ಮತ್ತು ಡಿವೈಎಸ್ಪಿ ಎಂ ಕೆ ಗಣಪತಿ ಆತ್ಮಹತ್ಯೆ ...
ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ
ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ

ಬೆಂಗಳೂರು: ಐಎಎಸ್ ಅಧಿಕಾರಿ ಡಿ ಕೆ ರವಿ ಅವರ ನಿಗೂಢ ಸಾವು ಮತ್ತು ಡಿವೈಎಸ್ಪಿ ಎಂ ಕೆ ಗಣಪತಿ ಆತ್ಮಹತ್ಯೆ ಪ್ರಕರಣಗಳಲ್ಲಿ ಸಚಿವ ಕೆ ಜೆ ಜಾರ್ಜ್ ಅವರ ಪರವಹಿಸಿ ನಿನ್ನೆ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ವಿಧಾನಸಭೆಯಲ್ಲಿ ಮಾತನಾಡಿದ್ದು ಪ್ರತಿಪಕ್ಷ ಬಿಜೆಪಿಯ ತೀವ್ರ ಟೀಕೆಗೆ ಗುರಿಯಾಗಿದ್ದಾರೆ.

ಈ ಕುರಿತು ತನ್ನ ಟ್ವಿಟ್ಟರ್ ಪೇಜ್ ನಲ್ಲಿ ಟ್ವೀಟ್ ಮಾಡಿರುವ ರಾಜ್ಯ ಬಿಜೆಪಿ, ಹೆಚ್ ಡಿ ಕುಮಾರಸ್ವಾಮಿಯವರು ಯೂಟರ್ನ್ ಮುಖ್ಯಮಂತ್ರಿ ಎಂದು ಸಾಬೀತಾಗಿದ್ದಾರೆ. ರಾಜ್ಯದಲ್ಲಿರುವ ಎಲ್ಲಾ ಯೂಟರ್ನ್ ಸೂಚನಾ ಫಲಕಗಳಿರುವ ಜಾಗಗಳಲ್ಲಿ ಕುಮಾರಸ್ವಾಮಿಯವರ ಫೋಟೋ ಹಾಕಬೇಕು ಎಂದು ಲೇವಡಿ ಮಾಡಿದೆ.

ನಾಲ್ಕು ವರ್ಷದ ಹಿಂದೆ ಡಿ ಕೆ ರವಿಯವರ ನಿಗೂಢ ಸಾವಿನ ಸಮಯದಲ್ಲಿ ಸಚಿವ ಕೆ ಜೆ ಜಾರ್ಜ್ ಅವರ ವಿರುದ್ಧ ಕೊಲೆ ಆರೋಪ ಕೇಳಿಬಂದಿದ್ದಾಗ  ಜಾರ್ಜ್ ರಂತಹ ಸಚಿವರು ಅಧಿಕಾರದಲ್ಲಿ ಮುಂದುವರಿಯಬಾರದು ಎಂದು ಹೇಳಿದ್ದರು.ಇಂದು ಮುಖ್ಯಮಂತ್ರಿಯಾಗಿರುವ ಕುಮಾರಸ್ವಾಮಿಯವರ ಸರ್ಕಾರದಲ್ಲಿ ಕೆ ಜೆ ಜಾರ್ಜ್ ಸಂಪುಟ ದರ್ಜೆ ಸಚಿವರಾಗಿರುವುದು ಮಾತ್ರವಲ್ಲದೆ ಅವರು ಅಮಾಯಕ ವ್ಯಕ್ತಿ ಎಂದು ಕುಮಾರಸ್ವಾಮಿಯವರು ಘೋಷಿಸಿದ್ದಾರೆ ಎಂದು ಬಿಜೆಪಿ ಟ್ವೀಟ್ ಮಾಡಿದೆ.

ಕುಮಾರಸ್ವಾಮಿಯವರ ಈ ಮಾತುಗಳಿಂದಲೇ ಅವರು ಎಂತಹ ವ್ಯಕ್ತಿ, ಎಷ್ಟು ಪ್ರಾಮಾಣಿಕರು, ಅವರು ನುಡಿದಂತೆ ನಡೆಯುವವರೇ ಎಂದು ತೋರಿಸುತ್ತದೆ ಎಂದು ಬಿಜೆಪಿ ಟೀಕಿಸಿದೆ.

ಸಚಿವ ಕೆ ಜೆ ಜಾರ್ಜ್ ಅವರನ್ನು ನಿನ್ನೆ ವಿಧಾನಸಭೆಯಲ್ಲಿ ಬಲವಾಗಿ ಸಮರ್ಥಿಸಿಕೊಂಡ ಕುಮಾರಸ್ವಾಮಿಯವರು ಅವರಿಗೆ ಕ್ಲೀನ್ ಚಿಟ್ ಕೊಟ್ಟಿದ್ದಾರೆ. ರಾಜ್ಯಪಾಲರ ವಂದನಾ ನಿರ್ಣಯದ ಪ್ರಸ್ತಾವದ ಮೇಲಿನ ಚರ್ಚೆಗೆ ಸರ್ಕಾರದ ಪರವಾಗಿ ಉತ್ತರಿಸುತ್ತಿದ್ದ ಸಂದರ್ಭದಲ್ಲಿ ಸಿಬಿಐ ನೀಡಿರುವ ವರದಿಯಲ್ಲಿ ಜಾರ್ಜ್ ಪಾತ್ರವಿಲ್ಲ. ಇನ್ನು ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣ ಕುರಿತಂತೆ ನನಗಿರುವ ಪ್ರಾಥಮಿಕ ಮಾಹಿತಿ ಪ್ರಕಾರ ಜಾರ್ಜ್ ಅವರ ಪಾತ್ರವಿಲ್ಲ ಎಂದು ಹೇಳಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com