ಸಿಎಂ ಕುಮಾರಸ್ವಾಮಿ 'ಕಣ್ಣೀರು': ಕಾಂಗ್ರೆಸ್ ನಾಯಕರಿಗೆ ಇರಿಸುಮುರಿಸು

ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿಯವರ 'ಕಣ್ಣೀರಿನ' ಪ್ರಸಂಗ ಸಮ್ಮಿಶ್ರ ...
ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ
ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ

ಬೆಂಗಳೂರು/ಮೈಸೂರು: ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿಯವರ 'ಕಣ್ಣೀರಿನ' ಪ್ರಸಂಗ ಸಮ್ಮಿಶ್ರ ಸರ್ಕಾರದಲ್ಲಿ ಹೊಸದೊಂದು ಬಿಕ್ಕಟ್ಟಿಗೆ ನಾಂದಿ ಹಾಡುವ ಸೂಚನೆ ಕಂಡುಬರುತ್ತಿದೆ. ಮೈತ್ರಿಪಕ್ಷ ಕಾಂಗ್ರೆಸ್ ಗೆ ಮುಖ್ಯಮಂತ್ರಿಯವರ ಕಣ್ಣೀರು ತೀವ್ರ ಮುಜುಗರ ತಂದಿದೆ ಎಂದು ಹೇಳಲಾಗುತ್ತಿದೆ.

ಸಾರ್ವಜನಿಕ ವೇದಿಕೆಯಲ್ಲಿ ಮುಖ್ಯಮಂತ್ರಿಯವರು ಕಣ್ಣೀರು ಹಾಕಿದ್ದು ಕಾಂಗ್ರೆಸ್ ನ ಕೆಲವು ಹಿರಿಯ ನಾಯಕರಿಗೆ ಸರಿ ಎಂದು ತೋರಿಬಂದಿಲ್ಲ. ಸಮ್ಮಿಶ್ರ ಸರ್ಕಾರದಲ್ಲಿ ಆಗುತ್ತಿರುವ ಎಲ್ಲಾ ಕೆಲಸಗಳ ಕ್ರೆಡಿಟ್ ನ್ನು ಪಡೆದುಕೊಳ್ಳಲು ಮತ್ತು ತಮ್ಮ ಅಭಿವೃದ್ಧಿಪರ ಕೆಲಸಗಳಿಗೆ ಕಾಂಗ್ರೆಸ್ ಪಕ್ಷದವರು ಅಡ್ಡಗಾಲು ಹಾಕುತ್ತಿದ್ದಾರೆ ಎಂದು ಜನರ ಮನಸ್ಸಿನಲ್ಲಿ ಭಾವನೆ ಮೂಡಿಸಲು ಜೆಡಿಎಸ್ ಮಾಡುತ್ತಿರುವ ಪ್ರಯತ್ನವಿದು ಎಂದು ಕಾಂಗ್ರೆಸ್ ನಾಯಕರು ಆರೋಪಿಸುತ್ತಿದ್ದಾರೆ ಎನ್ನಲಾಗಿದೆ.

ಈ ಬಗ್ಗೆ ನಿಮ್ಮೆ ಮಾಜಿ ಸಚಿವ ಕಾಂಗ್ರೆಸ್ ನಾಯಕ ಎ ಮಂಜು ಬಹಿರಂಗವಾಗಿ ತಮ್ಮ ಅಸಮಾಧಾನವನ್ನು ತೋಡಿಕೊಂಡಿದ್ದಾರೆ. ಮೈಸೂರಿನಲ್ಲಿ ಅವರು ನಿನ್ನೆ ಸುದ್ದಿಗಾರರೊಂದಿಗೆ ಮಾತನಾಡಿ, ಮುಖ್ಯಮಂತ್ರಿ ಕುಮಾರಸ್ವಾಮಿಯವರು ತಮ್ಮ ಇಂತಹ ಭಾವನಾತ್ಮಕ ನಟನೆಗೆ ಕೊನೆ ಹಾಡಬೇಕೆಂದು ಹೇಳಿದ್ದಾರೆ.

ರಾಜ್ಯದ ರೈತರ ಕಣ್ಣೀರು ಒರೆಸುವ ಬದಲು ಮುಖ್ಯಮಂತ್ರಿಯವರೇ ಕಣ್ಣೀರು ಹಾಕುವುದು ಸರಿಯಲ್ಲ. ವಿಷಕಂಠ ಎಂದಿರುವ ಕುಮಾರಸ್ವಾಮಿಯವರಿಗೆ ಕಾಂಗ್ರೆಸ್ ನವರು ಯಾವತ್ತಿಗೂ ವಿಷ ಕುಡಿಸಿಲ್ಲ. ದೇಶದ ಅತಿ ಹಳೆಯ ದೊಡ್ಡ ಪಕ್ಷವಾದ ಕಾಂಗ್ರೆಸ್ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿದೆ. ಪ್ರಮುಖ ಖಾತೆಗಳು ಸಹ ಜೆಡಿಎಸ್ ಗೆ ಸಿಕ್ಕಿದೆ. ಹೀಗಿರುವಾಗ ಕುಮಾರಸ್ವಾಮಿಯವರು ಕಣ್ಣೀರು ಹಾಕುವುದರಲ್ಲಿ ಕಾರಣವಿಲ್ಲ. ಬದಲಿಗೆ ಅವರು ಮುಂದಿನ 5 ವರ್ಷಗಳ ಕಾಲ ಜನರಿಗೆ ನೀಡಿರುವ ಅಭಿವೃದ್ಧಿಪರ ಕಾರ್ಯಕ್ರಮಗಳನ್ನು ಜಾರಿಗೆ ತರುವುದರ ಬಗ್ಗೆ ಗಮನ ಹರಿಸಲಿ, ಕಾಂಗ್ರೆಸ್ ಅವರಿಗೆ 5 ವರ್ಷದವರೆಗೆ ಸಂಪೂರ್ಣ ಬೆಂಬಲ ನೀಡುವುದಾಗಿ ಭರವಸೆ ನೀಡಿದೆ ಎಂದರು.

ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಸಹ ಕುಮಾರಸ್ವಾಮಿಯವರ ಕಣ್ಣೀರಿನಿಂದ ಪಕ್ಷದ ಗೌರವಕ್ಕೆ ಧಕ್ಕೆಯುಂಟಾಗುತ್ತದೆ ಎಂದು ಅಸಮಾಧಾನ ಹಂಚಿಕೊಂಡಿದ್ದಾರೆ ಎನ್ನಲಾಗಿದೆ. ಸಮ್ಮಿಶ್ರ ಸರ್ಕಾರ ನಡೆಸಲು ಧೈರ್ಯ ಮತ್ತು ದೃಢ ವಿಶ್ವಾಸ ಬೇಕು. ಸಾರ್ವಜನಿಕ ವೇದಿಕೆಯಲ್ಲಿ ಮುಖ್ಯಮಂತ್ರಿ ಕಣ್ಣೀರು ಹಾಕುವುದು ಅವರ ಅಸಹಾಯಕತೆಯನ್ನು ತೋರಿಸುತ್ತದೆ. ಇದು ಸಮ್ಮಿಶ್ರ ಸರ್ಕಾರದಲ್ಲಿ ಕಾಂಗ್ರೆಸ್ ಬಗ್ಗೆ ಜನರಿಗೆ ತಪ್ಪು ಸಂದೇಶ ರವಾನೆಯಾಗುತ್ತದೆ ಎಂದು ಖರ್ಗೆ ಹೇಳಿದ್ದಾರೆ ಎಂದು ತಿಳಿದುಬಂದಿದೆ.

ನಾವು ಮುಖ್ಯಮಂತ್ರಿ ಹುದ್ದೆ ಮತ್ತು ಪ್ರಮುಖ ಖಾತೆಗಳನ್ನು ಸಹ ಜೆಡಿಎಸ್ ಗೆ ಬಿಟ್ಟುಕೊಟ್ಟಿದ್ದೇವೆ. ಆದರೂ ಕೂಡ ಕುಮಾರಸ್ವಾಮಿಯವರು ಅಳುವುದರಲ್ಲಿ ಅರ್ಥವಿಲ್ಲ ಎಂದು ಖರ್ಗೆಯವರು ತಮ್ಮ ಪಕ್ಷದ ನಾಯಕರಲ್ಲಿ ಅಸಮಾಧಾನ ಹಂಚಿಕೊಂಡಿದ್ದಾರೆ ಎನ್ನಲಾಗುತ್ತಿದೆ.

ಶಮನಕ್ಕೆ ಹೆಚ್ ಡಿಕೆ ಯತ್ನ:
ಕಾಂಗ್ರೆಸ್ ನಾಯಕರು ಅಸಮಾಧಾನಗೊಳ್ಳುತ್ತಿದ್ದಂತೆ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಆಗಿರುವ ತೊಂದರೆಯನ್ನು ಸರಿಪಡಿಸಲು ಯತ್ನಿಸಿದ್ದಾರೆ. ನಾನು ಕಾಂಗ್ರೆಸ್ ವಿರುದ್ಧ ಅಸಮಾಧಾನದಿಂದ ಕಣ್ಣೀರು ಹಾಕಿದ್ದಲ್ಲ. ಜನರಿಗೆ ಕೊಟ್ಟಿರುವ ಭರವಸೆಗಳನ್ನು ಸರಿಯಾಗಿ ಈಡೇರಿಸಲಾಗುತ್ತಿಲ್ಲವಲ್ಲ ಎಂದು ಕಣ್ಣೀರು ಬಂತು ಎಂದು ನಿನ್ನೆ ರಾಮನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದರು.

ನಾನು ಕೊಟ್ಟಿರುವ ಭರವಸೆಗಳನ್ನು ಈಡೇರಿಸಲು ಎದುರಾಗುವ ಸವಾಲುಗಳನ್ನು ನೋಡಿ ನನಗೆ ಕಣ್ಣೀರು ಬಂತು. ಕಾಂಗ್ರೆಸ್ ನಿಂದ ನನಗೆ ತೊಂದರೆಯಾಗುತ್ತಿದೆ ಎಂದು ನಾನು ಎಂದಿಗೂ ಹೇಳಿಲ್ಲ. ನನ್ನ ಹೇಳಿಕೆಗಳನ್ನು ತಿರುಚಲಾಗಿದೆ. ತಪ್ಪಾಗಿ ಅರ್ಥೈಸಲಾಗಿದೆ. ಕಾಂಗ್ರೆಸ್  ನಾಯಕರಿಂದ ನನಗೆ ಯಾವುದೇ ರೀತಿಯ ತೊಂದರೆಯಾಗುತ್ತಿಲ್ಲ ಎಂದು ಕುಮಾರಸ್ವಾಮಿ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com