'ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ' ಶ್ರೀರಾಮುಲು ಹೇಳಿಕೆಗೆ ಶೋಭಾ ಆಕ್ಷೇಪ!

ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಕೂಗಿಗೆ ಕಿಚ್ಚು ಹಚ್ಚಿದ ಬಿಜೆಪಿ ಶಾಸಕ ಬಿ. ಶ್ರೀರಾಮುಲು ಅವರ ಹೇಳಿಕೆಗೆ ಸಂಸದೆ ಶೋಭಾ ಕರಂದ್ಲಾಜೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ...
ಶ್ರೀರಾಮುಲು-ಶೋಭಾ ಕಲಂದ್ಲಾಜೆ
ಶ್ರೀರಾಮುಲು-ಶೋಭಾ ಕಲಂದ್ಲಾಜೆ
ಮೈಸೂರು: ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಕೂಗಿಗೆ ಕಿಚ್ಚು ಹಚ್ಚಿದ ಬಿಜೆಪಿ ಶಾಸಕ ಬಿ. ಶ್ರೀರಾಮುಲು ಅವರ ಹೇಳಿಕೆಗೆ ಸಂಸದೆ ಶೋಭಾ ಕರಂದ್ಲಾಜೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. 
ಉತ್ತರ ಕರ್ನಾಟಕಕ್ಕೆ ಅನ್ಯಾಯವಾದರೆ ಸುಮ್ಮನಿರಲ್ಲ ಎಂದು ಶ್ರೀರಾಮುಲು ಅವರು ಹೇಳುತ್ತಿದ್ದರೆ ಇತ್ತ ಶೋಭಾ ಕರಂದ್ಲಾಜೆ ಅವರು ಪ್ರತ್ಯೇಕ ರಾಜ್ಯದ ಬೇಡಿಕೆ ಸರಿಯಲ್ಲ ಎಂದು ಹೇಳಿದ್ದು ಪ್ರತ್ಯೇಕ ರಾಜ್ಯ ಕುರಿತಂತೆ ಬಿಜೆಪಿ ನಾಯಕರೇ ಪ್ರತ್ಯೇಕ ಹೇಳಿಕೆಗಳನ್ನು ನೀಡುತ್ತಿದ್ದಾರೆ. 
ಪ್ರತ್ಯೇಕ ರಾಜ್ಯವಾದರೆ ಎಲ್ಲಾ ಸಮಸ್ಯೆಗೆ ಪರಿಹಾರ ಸಿಗುವುದಿಲ್ಲ. ನದಿ ನೀರಿನ ಹಂಚಿಕೆಯಲ್ಲಿ ನಮಗೆ ನ್ಯಾಯ ಸಿಗಬೇಕಾದರೆ ಇಡೀ ರಾಜ್ಯದ ಜನ ಒಗ್ಗಟ್ಟಿನಿಂದ ಇರಬೇಕು. ಆಂಧ್ರ-ತೆಲಂಗಾಣ ಪ್ರತ್ಯೇಕ ರಾಜ್ಯವಾದ ನಂತರ ದುರ್ಬಲವಾಗಿವೆ. ಅಂತಾ ಪರಿಸ್ಥಿತಿ ರಾಜ್ಯದಲ್ಲೂ ಬರುವುದು ಬೇಡ ಎಂದು ಕರಂದ್ಲಾಜೆ ಹೇಳಿದ್ದಾರೆ. 
ಉತ್ತರ ಕರ್ನಾಟಕದ ಜನರ ಜೊತೆ ಬಿಜೆಪಿ ಸದಾಕಾಲ ಇರುತ್ತೆ. ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಬೇಕೆಂಬ ಬೇಡಿಕೆ ಸರಿಯಲ್ಲ. ಉತ್ತರ ಕರ್ನಾಟಕಕ್ಕೆ ಅನ್ಯಾಯವಾದರೆ ಸುಮ್ಮನೆ ಕೂರುವುದಿಲ್ಲ. ಉತ್ತರ ಕರ್ನಾಟಕದ ಶಾಸಕರು ಚರ್ಚೆ ನಡೆಸುತ್ತಿದ್ದೇವೆ. ಮುಂದೆ ಏನಾಗುತ್ತೆ ಅನ್ನೋದನ್ನ ನೀವೇ ಕಾದುನೋಡಿ ಎಂದು ಹೇಳಿದ್ದಾರೆ. 
ಇಂದು ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀರಾಮುಲು, ಉತ್ತರ ಕರ್ನಾಟಕಕ್ಕೆ ಅನ್ಯಾಯವಾದರೆ ಸಹಿಸುವುದಿಲ್ಲ, ಪ್ರತ್ಯೇಕ ರಾಜ್ಯಕ್ಕಾಗಿ ತೆಲಂಗಾಣ ಮಾದರಿಯಲ್ಲಿ  ಹೋರಾಟ ನಡೆಸಬೇಕಾಗುತ್ತದೆ. ಹೋರಾಟದ ನೇತೃತ್ವವನ್ನು ನಾನೇ ವಹಿಸುತ್ತೇನೆ ಎಂದು ಗುಡುಗಿದ್ದರು.
ಇದೇ ವೇಳೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಶ್ರೀರಾಮುಲು, ಉತ್ತರ ಕರ್ನಾಟಕ ಮತ್ತು ಹೈದರಾಬಾದ್ ಕರ್ನಾಟಕ ಅಭಿವೃದ್ಧಿ ವಿಚಾರದಲ್ಲಿ ಸಿಎಂ ತಾರತಮ್ಯ ನೀತಿ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿದರು.
ರೈತರ ಎಲ್ಲಾ ಸಾಲ ಮನ್ನಾ ಮಾಡಲು ಕುಮಾರಸ್ವಾಮಿಗೆ ಆಗಿಲ್ಲ ಮತ್ತು ಮನ್ನಾ ಮಾಡಿದ ಸಾಲದ ಕುರಿತು ಅಧಿಸೂಚನೆಯನ್ನು ಹೊರಡಿಸಿಲ್ಲ. ಬಜೆಟ್‌ ಬಳಿಕ ಉತ್ತರ ಕರ್ನಾಟಕದ ಎಲ್ಲಾ ಶಾಸಕರೊಂದಿಗೆ ಮಾತಾಡಿದ್ದೇನೆ. ಮಾತುಕತೆ ಮುಂದುವರಿದಿದೆ. ಅನ್ಯಾಯ ಮುಂದುವರಿದರೆ ತೆಲಂಗಾಣ ಮಾದರಿ ಹೋರಾಟ ಮಾಡಲು ಸಿದ್ದ ಎಂದು ಎಚ್ಚರಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com