ಬೆಂಗಳೂರು: ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟದ ವಿರೋಧಿಗಳ ಭಯದ ನೆರಳಿನಲ್ಲಿ ಎರಡು ವಾರಗಳ ಹೆಚ್ ಡಿ ಕುಮಾರಸ್ವಾಮಿ ನೇತೃತ್ವದ ಸಚಿವ ಸಂಪುಟ ಬುಧವಾರ ರಚನೆಯಾಗುತ್ತಿದೆ.
ಸಚಿವ ಸಂಪುಟ ರಚನೆಯಲ್ಲಿ ಖಾತೆ ಹಂಚಿಕೆಯಲ್ಲಿ ಕೇಳಿಬಂದ ವಿರೋಧದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಹಳಬರನ್ನು ಬದಿಗೊತ್ತಿ ಹೊಸಬರಿಗೆ ಹೆಚ್ಚಿನ ಪ್ರಾತಿನಿಧಿತ್ವ ನೀಡುವ ತನ್ನ ಯೋಜನೆಯನ್ನು ಕೈಬಿಟ್ಟಿದೆ. ಇಂದಿನ ಸಚಿವ ಪಟ್ಟಿ ಹಿಂದಿನ ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿನ ಸಚಿವಾಲಯಕ್ಕೆ ಹೆಚ್ಚು ಕಡಿಮೆ ಸಾಮ್ಯತೆಯಿದೆ. ಸಿದ್ದರಾಮಯ್ಯ ಸರ್ಕಾರದ ಸಂಪುಟದಲ್ಲಿದ್ದ ಹೆಚ್ ಕೆ ಪಾಟೀಲ್, ಆರ್ ವಿ ದೇಶಪಾಂಡೆ ಮತ್ತು ಆರ್ ರಾಮಲಿಂಗಾ ರೆಡ್ಡಿ ಅವರನ್ನು ಕೈಬಿಡಲಾಗಿದೆ.
ಅಲ್ಪಸಂಖ್ಯಾತ ಸಮುದಾಯದಿಂದ ರೋಶನ್ ಬೇಗ್, ಯು ಟಿ ಖಾದರ್ ಮತ್ತು ಕೆಜೆ ಜಾರ್ಜ್ ಅಲ್ಪಸಂಖ್ಯಾತ ಸಮುದಾಯಗಳನ್ನು ಪ್ರತಿನಿಧಿಸಲಿದ್ದಾರೆ. ನಿನ್ನೆ ಸಮ್ಮಿಶ್ರ ಸರ್ಕಾರದಲ್ಲಿ ಸಚಿವರ ಖಾತೆ ಹಂಚಿಕೆಗೆ ಕಾಂಗ್ರೆಸ್ ಮತ್ತು ಜೆಡಿಎಸ್ ಎರಡೂ ಪಕ್ಷಗಳ ನಾಯಕರು ಸಾಕಷ್ಟು ಹರಸಾಹಸಪಟ್ಟಿದ್ದಾರೆ. ಹೀಗಾಗಿ ಎರಡೂ ಪಕ್ಷಗಳು ಕೆಲವು ಖಾತೆಗಳನ್ನು ಸದ್ಯದ ಮಟ್ಟಿಗೆ ಖಾಲಿಯಿಟ್ಟು ಮುಂದಿನ ದಿನಗಳಲ್ಲಿ ಭಿನ್ನಮತೀಯ ನಾಯಕರಿಗೆ ನೀಡಲು ಯೋಜನೆ ಹಾಕಿಕೊಂಡಿವೆ.
ಜೂನ್ 1 ರಂದು ಮಾಡಿಕೊಂಡ ಸಮ್ಮಿಶ್ರ ಸರ್ಕಾರದ ಒಪ್ಪಂದದ ಪ್ರಕಾರ, ಕಾಂಗ್ರೆಸ್ ಗೆ 22 ಸಚಿವ ಸ್ಥಾನ ಮತ್ತು ಜೆಡಿಎಸ್ ಗೆ 12 ಸಚಿವ ಹುದ್ದೆಗಳನ್ನು ನೀಡಲಾಗಿತ್ತು. ಆದರೂ ಇಂದು ಕಾಂಗ್ರೆಸ್ 17ರಿಂದ 18 ಮತ್ತು ಜೆಡಿಎಸ್ 8 ಸಚಿವ ಸ್ಥಾನಗಳನ್ನು ಭರ್ತಿ ಮಾಡಲಿವೆ. ಇಂದು ಮಧ್ಯಾಹ್ನ 2.12ಕ್ಕೆ ರಾಜಭವನದ ಗಾಜಿನ ಮನೆಯಲ್ಲಿ ನೂತನ ಸಚಿವರುಗಳ ಪ್ರಮಾಣವಚನ ಸ್ವೀಕಾರ ಸಮಾರಂಭ ನಡೆಯಲಿದೆ.
Advertisement