ಬೆಂಗಳೂರು: ಹಿಂದಿನ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಬೆಂಬಲಕ್ಕೆ ಮೂಲವಾಗಿದ್ದ ಕುರುಬ ಸಮಾಜ ಇಂದಿನ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದ ವಿರುದ್ಧ ತಿರುಗಿ ಬಿದ್ದಿದೆ. ಇದಕ್ಕೆ ಕಾರಣ ಮೊನ್ನೆ ನಡೆದ ಸಚಿವ ಸಂಪುಟ ರಚನೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಕುರುಬ ಸಮುದಾಯದ ಯಾರೊಬ್ಬ ರಾಜಕೀಯ ಮುಖಂಡರನ್ನು ಕೂಡ ಸಚಿವರನ್ನಾಗಿ ಮಾಡದಿರುವುದು.
ಕಾಂಗ್ರೆಸ್ ನಲ್ಲಿರುವ ಕುರುಬ ಸಮುದಾಯದ ಶಾಸಕರಾದ ಎಂಟಿಬಿ ನಾಗರಾಜ್, ಶಿವಳ್ಳಿ ಮತ್ತು ಎಂಎಲ್ ಸಿ ಹೆಚ್ ಎಂ ರೇವಣ್ಣ ತಮ್ಮ ಅಸಮಾಧಾನವನ್ನು ಪಕ್ಷದ ನಾಯಕರ ಮೇಲೆ ಹೊರಹಾಕುತ್ತಿದ್ದಾರೆ. ಕುರುಬ ಸಮುದಾಯದ ಕನಿಷ್ಠ ಇಬ್ಬರು ಶಾಸಕರಿಗಾದರೂ ಮಂತ್ರಿ ಸ್ಥಾನ ನೀಡದಿದ್ದರೆ ರಾಜ್ಯಾದ್ಯಂತ ಪ್ರತಿಭಟನೆ, ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಎಂಟಿಬಿ ನಾಗರಾಜ್ ಕಾಂಗ್ರೆಸ್ ನಾಯಕರ ವಿರುದ್ಧ ನೇರವಾಗಿ ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ಕಾಂಗ್ರೆಸ್ ಪಕ್ಷದಿಂದ 8 ಮಂದಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಆದರೆ ಯಾರೊಬ್ಬರನ್ನು ಕೂಡ ಸಂಪುಟಕ್ಕೆ ಸೇರಿಸಿಲ್ಲ. ಇದರಿಂದ ಇಡೀ ಕುರುಬ ಸಮುದಾಯಕ್ಕೆ ಅನ್ಯಾಯವಾಗಿದೆ. ಕಾಂಗ್ರೆಸ್ ನಮ್ಮನ್ನು ನಿರ್ಲಕ್ಷ್ಯ ಮಾಡುತ್ತಿದೆ. ನಮ್ಮ ಮಾತಿಗೆ ಬೆಲೆ ನೀಡದಿದ್ದರೆ ನಮ್ಮ ಮುಂದಿನ ಕ್ರಮಗಳ ಕುರಿತು ನಿರ್ಧರಿಸಬೇಕಾಗುತ್ತದೆ ಎಂದಿರುವ ಅವರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಕೂಡ ಅಸಮಾಧಾನ ಹೊರಹಾಕಿದ್ದಾರೆ. ನಮ್ಮ ಸಮುದಾಯದ ಮುಖಂಡರೇ ನಮ್ಮನ್ನು ತುಳಿಯುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಕುರುಬ ಸಮುದಾಯದ ಕಾಂಗ್ರೆಸ್ ಶಾಸಕರಲ್ಲಿನ ಅಸಮಾಧಾನ ಈ ಸಮುದಾಯದಲ್ಲಿ ತನ್ನ ಪ್ರಭಾವವನ್ನು ಬೀರಲು ಬಿಜೆಪಿಗೆ ವರವಾಗಿದೆ ಎನ್ನಬಹುದು. ಹಲವು ಅತೃಪ್ತ ಶಾಸಕರು ಬಿಜೆಪಿಯತ್ತ ಮುಖಮಾಡಲು ಮುಂದಾಗಿದ್ದಾರೆ. ಕುರುಬ ಸಮುದಾಯವನ್ನು ದೊಡ್ಡ ಪ್ರಮಾಣದಲ್ಲಿ ತಲುಪಲು ಸಿದ್ಧರಾಗಿದ್ದೇವೆ ಎನ್ನುತ್ತಾರೆ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ.
Advertisement