ಜಯನಗರ ಕ್ಷೇತ್ರ ಚುನಾವಣೆ ಮತ ಎಣಿಕೆ: ಕಾಂಗ್ರೆಸ್ ನ ಸೌಮ್ಯ ರೆಡ್ಡಿ ಮುನ್ನಡೆ

ಜಯನಗರ ವಿಧಾನಸಭಾ ಕ್ಷೇತ್ರದ ಚುನಾವಣೆಯ ಮತ ಎಣಿಕೆ ಕಾರ್ಯ ....
ಸೌಮ್ಯ ರೆಡ್ಡಿ-ಬಿ ಎನ್ ಪ್ರಹ್ಲಾದ್
ಸೌಮ್ಯ ರೆಡ್ಡಿ-ಬಿ ಎನ್ ಪ್ರಹ್ಲಾದ್

ಬೆಂಗಳೂರು: ಜಯನಗರ ವಿಧಾನಸಭಾ ಕ್ಷೇತ್ರದ ಚುನಾವಣೆಯ ಮತ ಎಣಿಕೆ ಕಾರ್ಯ ಪ್ರಗತಿಯಲ್ಲಿದ್ದು,  6ನೇ ಸುತ್ತಿನ ಮತ ಎಣಿಕೆ ಮುಕ್ತಾಯವಾಗಿದ್ದು ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸೌಮ್ಯಾ ರೆಡ್ಡಿ ಮುನ್ನಡೆ ಕಾಯ್ದುಕೊಂಡಿದ್ದಾರೆ.

ಸೌಮ್ಯ ರೆಡ್ಡಿಯವರಿಗೆ ಇಲ್ಲಿಯವರೆಗೆ 22,356  ಮತಗಳು ಲಭ್ಯವಾಗಿದ್ದು, ಬಿಜೆಪಿಯ ಪ್ರಹ್ಲಾದ್ ಬಾಬುಗೆ 18,763 ಮತಗಳು ಸಿಕ್ಕಿವೆ. ಸೌಮ್ಯ ರೆಡ್ಡಿಯವರು 3,593 ಮತಗಳ ಮುನ್ನಡೆ ಕಾಯ್ದುಕೊಂಡಿದ್ದಾರೆ.

ಬಿಗಿ ಪೊಲೀಸ್ ಬಂದೋಬಸ್ತ್ ನಲ್ಲಿ ಮತ ಎಣಿಕೆ ನಡೆಯುತ್ತಿದೆ. ಕಳೆದ ಸೋಮವಾರ ನಡೆದ ಮತದಾನದಲ್ಲಿ ಶೇಕಡಾ 55ರಷ್ಟು ಮತ ಚಲಾವಣೆಯಾಗಿತ್ತು. ಕರ್ನಾಟಕ ವಿಧಾನಸಭೆ ಚುನಾವಣೆ ಮೇ 12ರಂದು ನಡೆದಿತ್ತಾದರೂ ಭಾರತೀಯ ಜನತಾ ಪಾರ್ಟಿ ಅಭ್ಯರ್ಥಿ ಬಿ ಎನ್ ವಿಜಯ ಕುಮಾರ್ ಅವರ ಸಾವಿನ ಹಿನ್ನಲೆಯಲ್ಲಿ ಜಯನಗರ ಕ್ಷೇತ್ರದ ಚುನಾವಣೆಯನ್ನು ಮುಂದೂಡಲಾಗಿತ್ತು.

ಕ್ಷೇತ್ರದ 2 ಲಕ್ಷ ಮತದಾರರಲ್ಲಿ 1,11,689 ಮಂದಿ ತಮ್ಮ ಸಾಂವಿಧಾನಿಕ ಹಕ್ಕು ಚಲಾಯಿಸಿದರು.

ವಿಜಯಕುಮಾರ್ ಅವರ ಸೋದರ ಬಿ ಎನ್ ಪ್ರಹ್ಲಾದ್ ಬಿಜೆಪಿಯಿಂದ ಹಾಗೂ ಕಾಂಗ್ರೆಸ್-ಜೆಡಿಎಸ್ ಹೊಂದಾಣಿಕೆ ಮಾಡಿಕೊಂಡು ಸೌಮ್ಯ ರೆಡ್ಡಿಯವರನ್ನು ಕಣಕ್ಕಿಳಿಸಿದೆ. ಇವರಿಬ್ಬರ ನಡುವೆ ನೇರ ಹಣಾಹಣಿ  ಏರ್ಪಟ್ಟಿದೆ. ಒಟ್ಟು 19 ಮಂದಿ ಚುನಾವಣಾ ಸ್ಪರ್ಧಾ ಕಣದಲ್ಲಿದ್ದಾರೆ. ಪಕ್ಷೇತರ ಅಭ್ಯರ್ಥಿ ರವಿ ಕೃಷ್ಣಾರೆಡ್ಡಿ 735 ಮತಗಳನ್ನು ಗಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com