ಮೈಸೂರು: ಕೇಂದ್ರದಲ್ಲಿ ಮತ್ತೊಮ್ಮೆ ಅಧಿಕಾರಕ್ಕೆ ಬರಲು ಯತ್ನಿಸುತ್ತಿರುವ ಬಿಜೆಪಿ, ಲೋಕಸಭೆ ಚುನಾವಣೆಗಾಗಿ ರಾಜ್ಯದಲ್ಲಿ ಸಿದ್ಧತೆ ನಡೆಸುತ್ತಿದೆ.
ಕಳೆದ ವಿಧಾನ ಸಭೆ ಚುನಾವಣೆಯಲ್ಲಿ ಹಳೇ ಮೈಸೂರು ಭಾಗದಲ್ಲಿ ಕೇವಲ ಐದು ಸೀಟುಗಳಲ್ಲಿ ಬಿಜೆಪಿ ಗೆಲುವು ಸಾಧಿಸಿತ್ತು. ಮೈಸೂರಿನಲ್ಲಿ 3 ಚಾಮರಾಜನಗರ ಮತ್ತು ಹಾಸನದಲ್ಲಿ ತಲಾ ಒಂದು ಸೀಟು ಗಳಿಸಿತ್ತು, ಹೀಗಾಗಿ ಸ್ಥಳೀಯ ಮಟ್ಟದ ನಾಯಕತ್ವ ಸುಧಾರಿಸಲು ಬಿಜೆಪಿ ಬಯಸಿದೆ, 2019ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಹಿನ್ನೆಲೆಯಲ್ಲಿ ಚಾಮರಾಜನಗರ ಮತ್ತು ಮಂಡ್ಯ ಲೋಕಸಭೆ ಕ್ಷೇತ್ರಗಳ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಬಿಜೆಪಿ ಕಾರ್ಯತಂತ್ರ ರೂಪಿಸುತ್ತಿದೆ.
ಚಾಮರಾಜನಗರದಲ್ಲಿ ಕೆಲವೇ ಕೆಲವು ಮತಗಳ ಅಂತರದಿಂದ ಬಿಜೆಪಿ ಸೋತಿತ್ತು, ಈ ಕ್ಷೇತ್ರದಲ್ಲಿ ವೀರಶೈವ, ದಲಿತ, ನಾಯಕ ಮತ್ತು ಉಪ್ಪಾರ ಸಮುದಾಯಗಳ ಪ್ರಾಬಲ್ಯವಿದೆ , ವೀರಶೈವ ಮತ್ತು ನಾಯಕ ಸಮುದಾಯದ ಜೊತೆಗೆ ಕೆಲವು ಹಿಂದುಳಿದ ವರ್ಗಗಳು ಕೂಡ ಬಿಜೆಪಿ ಬೆಂಬಲಿಸಿವೆ, ಹೀಗಾಗಿ ಬಿಜೆಪಿ ದಲಿತರ ಮೇಲೆ ಕಣ್ಣು ನೆಟ್ಟಿದೆ.
ಹಿರಿಯ ನಾಯಕ ಶ್ರೀನಿವಾಸ್ ಪ್ರಸಾದ್ ಅವರಿಗೆ ಅತಿ ಹೆಚ್ಚಿನ ದಲಿತರ ಬೆಂಬಲವಿದೆ, ಹೀಗಾಗಿ ಕಾಂಗ್ರೆಸ್ ವೋಟ್ ಬ್ಯಾಂಕ್ ಮೇಲೆ ಪರಿಣಾಮ ಬೀರಲಿದೆ, ಲೋಕಸಭೆ ಚುನಾವಣಾ ಮಾರ್ಗಸೂಚಿ ರಚಿಸಲು ಬಿಜೆಪಿ ಶೀಘ್ರವೇ ಸಭೆ ಸೇರಲಿದೆ ಎಂದು ಮೂಲಗಳು ತಿಳಿಸಿವೆ.
ಮಂಡ್ಯದಿಂದ ಅಶೋಕ್ ಸ್ಪರ್ಧೆ?
ಸಿಎಸ್ ಪುಟ್ಟರಾಜು ಅವರ ರಾಜಿನಾಮೆಯಿಂದ ತೆರವಾಗಿರುವ ಮಂಡ್ಯ ಲೋಕಸಭೆ ಕ್ಷೇತ್ರಕ್ಕೆ ಬಿಜೆಪಿ ಸೂಕ್ತ ಅಭ್ಯರ್ಥಿಯ ಹುಡುಕಾಟ ನಡೆಸುತ್ತಿದೆ. ಸಂಸದರಾಗಿದ್ದ ಸಿಎಸ್ ಪುಟ್ಟರಾಜು ಮೇಲುಕೋಟೆ ವಿಧಾನ ಸಭೆ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದಾರೆ, ಹೀಗಾಗಿ ಮಂಡ್ಯ ಲೋಕಸಭೆ ಉಪ ಚುನಾವಣೆಯಲ್ಲಿ ಜೆಡಿಎಸ್ ನಿಂದ ಮಾಜಿ ಪ್ರಧಾನಿ ಎಚ್ .ಡಿ ದೇವೇಗೌಡ ಸ್ಪರ್ಧಿಸಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಹೀಗಾಗಿ ಬಿಜೆಪಿ ಕೂಡ ಮಂಡ್ಯ ಕ್ಷೇತ್ರಕ್ಕೆ ಮಾಜಿ ಡಿಸಿಎಂ ಆರ್ ಅಶೋಕ್ ಅವರನ್ನು ಕಣಕ್ಕಿಳಿಸಲು ಸಿದ್ಧತೆ ನಡೆಸುತ್ತಿದೆ ಎದು ಹೇಳಲಾಗುತ್ತಿದೆ. ಒಕ್ಕಲಿಗರ ನಾಯಕನಾಗಿರುವ ಅಶೋಕ್ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಮಂಡ್ಯ ಜಿಲ್ಲಾ ಉಸ್ತುವಾರಿ ಸಚವರಾಗಿ ಕೆಲಸ ಮಾಡಿದ್ದರು.