ಟಿಕೆಟ್ ಆಕಾಂಕ್ಷಿಗಳು ಪಕ್ಷದ ಪದಾಧಿಕಾರಿ ಹುದ್ದೆ ತೊರೆಯಿರಿ: ಕಾಂಗ್ರೆಸ್ ಖಡಕ್ ಸೂಚನೆ

ವಿಧಾನಸಭೆ ಚುನಾವಣೆ ಟಿಕೆಟ್‌ ಆಕಾಂಕ್ಷಿಗಳು ಪಕ್ಷದ ಪದಾಧಿಕಾರಿ ಹುದ್ದೆ ತೊರೆಯಬೇಕು.ಇಲ್ಲದಿದ್ದರೆ ಮುಲಾಜಿಲ್ಲದೇ ವಜಾ ಮಾಡಲಾಗುವುದು ಎಂದು ರಾಜ್ಯ ...
ಕೆ.ಸಿ ವೇಣುಗೋಪಾಲ್
ಕೆ.ಸಿ ವೇಣುಗೋಪಾಲ್
Updated on
ಬೆಂಗಳೂರು:  ವಿಧಾನಸಭೆ ಚುನಾವಣೆ ಟಿಕೆಟ್‌ ಆಕಾಂಕ್ಷಿಗಳು ಪಕ್ಷದ ಪದಾಧಿಕಾರಿ ಹುದ್ದೆ ತೊರೆಯಬೇಕು.ಇಲ್ಲದಿದ್ದರೆ ಮುಲಾಜಿಲ್ಲದೇ ವಜಾ ಮಾಡಲಾಗುವುದು ಎಂದು ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಕೆ.ಸಿ. ವೇಣುಗೋಪಾಲ್‌ ಸೂಚನೆ ಕೊಟ್ಟಿದ್ದಾರೆ.
ಪಕ್ಷದ ಸಂಘಟನೆಯ ಜವಾಬ್ದಾರಿ ಹೊತ್ತಿರುವ ಹಲವರು ಈ ಬಾರಿ ಚುನಾವಣಾ ಕಣಕ್ಕಿಳಿಯಲು ಅಪೇಕ್ಷಿಸಿದ್ದಾರೆ. ಹಾಗಾಗಿ ಇಂತಹ ತಾಕೀತು ಮಾಡಿರುವ ಕೆಪಿಸಿಸಿ ಅಧ್ಯಕ್ಷರು, ''ಮುಂದಿನ ವಿಧಾನಸಭಾ ಚುನಾವಣೆ ಟಿಕೆಟ್‌ ಆಕಾಂಕ್ಷಿಗಳು ತಕ್ಷಣವೇ ರಾಜೀನಾಮೆ ನೀಡಬೇಕು. ನಿಮ್ಮ ಬದಲಿಗೆ ಬೇರೆಯವರಿಗೆ ಪದಾಧಿಕಾರಿ ಜವಾಬ್ದಾರಿ ನೀಡಲಾಗುವುದು. ರಾಜೀನಾಮೆ ನೀಡದಿದ್ದರೆ ನಾನೇ ನಿಮ್ಮನ್ನು ಕಿತ್ತು ಹಾಕುತ್ತೇನೆ,'' ಎಂದು ಎಚ್ಚರಿಕೆ ನೀಡಿದರು. 
ಸಚಿವರು, ಶಾಸಕರು ಪಕ್ಷದ ಕೆಲಸಕ್ಕೆ ಸಹಕರಿಸುತ್ತಿಲ್ಲವೆಂಬ ಕೆಲವರ ಆರೋಪಕ್ಕೆ ಪ್ರತಿಕ್ರಿಯಿಸಿದ ವೇಣುಗೋಪಾಲ್‌, ''ವಾರದೊಳಗೆ ಸಚಿವರು, ಶಾಸಕರನ್ನು ಕರೆಸಿ ಮತ್ತೊಂದು ಸಭೆ ನಡೆಸಲಾಗುವುದು. ಪಕ್ಷ ಯಾರ ಮನೆಯ ಆಸ್ತಿಯೂ ಅಲ್ಲ. ಪಕ್ಷದ ಹಿತಕ್ಕೆ ಎಲ್ಲರೂ ಕೆಲಸ ಮಾಡಬೇಕೆಂದು ಅವರಿಗೆ ಮನದಟ್ಟು ಮಾಡಲಾಗುವುದು,'' ಎಂಬ ಭರವಸೆ ನೀಡಿದರು ಎನ್ನಲಾಗಿದೆ.
ಏಪ್ರಿಲ್‌ ಮೊದಲ ವಾರದಿಂದ 23 ರ ವರೆಗೆ ರಾಜ್ಯದ 224 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಪಾದಯಾತ್ರೆ ನಡೆಸಿ ಮನೆ ಮನೆಗೆ ಭೇಟಿ ನೀಡಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ ತಿಳಿಸಿದ್ದಾರೆ.
ಪಕ್ಷದ ಪದಾಧಿಕಾರಿಗಳ ಸಭೆ ಬಳಿಕ ಮಾತನಾಡಿದ ಅವರು, ''ಬಿಜೆಪಿಯನ್ನು ಅಧಿಕಾರಕ್ಕೆ ಬರಲು ಬಿಡಬಾರದು. ಕಾಂಗ್ರೆಸ್‌ ಪುನಃ ಅಧಿಕಾರಕ್ಕೆ ಬರಲು ಏನೇನು ಮಾಡಬೇಕು ಎಂಬ ಬಗ್ಗೆ ಚರ್ಚಿಸಲಾಗಿದೆ. ಮಾರ್ಚ್ 20 ಮತ್ತು 21 ರಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ  ಕರಾವಳಿ ಪ್ರದೇಶದಲ್ಲಿ  ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ.  ಮಾರ್ಚ್ 24 ಮತ್ತು 25 ರಂದು ಹಳೇ ಮೈಸೂರು ಭಾಗದಲ್ಲಿ ನಡೆಯುವ ರ್ಯಾಲಿಯಲ್ಲಿ ರಾಹುಲ್ ಭಾಗವಹಿಸಲಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com