ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ನಾಳೆ ಸಂಜೆ 5 ಗಂಟೆಗೆ ಬ್ರೇಕಿಂಗ್ ನ್ಯೂಸ್ ನೀಡುವುದಾಗಿ ಟ್ವೀಟ್ ಮಾಡುವ ಮೂಲಕ ಕುತೂಹಲ ಮೂಡಿಸಿದ್ದಾರೆ.
ರಾಜ್ಯ ವಿಧಾನಸಭೆ ಚುನಾವಣೆ ಹೊಸ್ತಿಲಿನಲ್ಲಿರುವ ಈ ಸಂದರ್ಭದಲ್ಲಿ, ಆಡಳಿತ ಪಕ್ಷ ಮತ್ತು ಪ್ರತಿಪಕ್ಷಗಳ ನಾಯಕರ ಆರೋಪ, ಪ್ರತ್ಯಾರೋಪಗಳ ನಡುವೆ ಯಡಿಯೂರಪ್ಪನವರ ಈ ಹೊಸ ಟ್ವೀಟ್ ಸಂಚಲನ ಮೂಡಲಾರಂಭಿಸಿದೆ. ಯಡಿಯೂರಪ್ಪನವರು ಯಾರ ಬಗ್ಗೆ, ಏನು ಬ್ರೇಕಿಂಗ್ ನ್ಯೂಸ್ ಕೊಡಲಿದ್ದಾರೆ ಎಂಬ ಕುತೂಹಲ ರಾಜಕೀಯ ವಲಯದಲ್ಲಿ ಮತ್ತು ಜನತೆಯಲ್ಲಿ ಕಾಡಲಾರಂಭಿಸಿದೆ.
ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರ ವಿರುದ್ಧ ನಿಂದನೆಯ ಸತ್ಯಕ್ಕೆ ದೂರವಾದ ಹೇಳಿಕೆಗಳನ್ನು ಸಾರ್ವಜನಿಕವಾಗಿ ನೀಡಿರುವುದಕ್ಕೆ ಸಂಬಂಧಪಟ್ಟಂತೆ ಹೈಕೋರ್ಟ್ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಕೆಲವು ಕಾಂಗ್ರೆಸ್ ಮುಖಂಡರಿಗೆ ನೊಟೀಸ್ ಜಾರಿ ಮಾಡಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಇನ್ನಿತರ ಕೆಲವು ಕಾಂಗ್ರೆಸ್ ಮುಖಂಡರು ತಾವು ಸಾರ್ವಜನಿಕವಾಗಿ ಈಗಾಗಲೇ ಖುಲಾಸೆಗೊಂಡಿರುವ ಕೇಸುಗಳೂ ಸೇರಿದಂತೆ ತಮ್ಮನ್ನು ಅಪರಾಧಿ ಎಂಬಂತೆ ಮಾತನಾಡುತ್ತಿದ್ದು ಮಾನಹಾನಿ ಮಾಡುತ್ತಿದ್ದಾರೆ.
ಸಿದ್ದರಾಮಯ್ಯನವರು ಬಹುತೇಕ ಭಾಷಣಗಳಲ್ಲಿ ತಮ್ಮನ್ನು ಜೈಲಿಗೆ ಹೋಗಿ ಬಂದವರು, ಚೆಕ್ ಮೂಲಕ ಲಂಚ ಪಡೆದವರು ಎಂದು ಹೀಯಾಳಿಸುತ್ತಿದ್ದಾರೆ ಎಂದು ಯಡಿಯೂರಪ್ಪ ಅವರು ಹೈಕೋರ್ಟ್ನಲ್ಲಿ ದೂರು ಸಲ್ಲಿಸಿದ್ದರು.
Advertisement