ಮಂಡ್ಯ: ನಟಿ ಹಾಗೂ ಎಐಸಿಸಿ ಸಾಮಾಜಿಕ ಜಾಲತಾಣಗಳ ಮುಖ್ಯಸ್ಥೆ ರಮ್ಯಾ ಅವರ ತಾಯಿ ರಂಜಿತಾ ಅವರು ಕಾಂಗ್ರೆಸ್ ವಿರುದ್ಧವೇ ಬಂಡಾಯವೆದಿದ್ದು, ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಮಂಗಳವಾರ ಹೇಳಿದ್ದಾರೆ.
ಮಂಡ್ಯ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ರಮ್ಯಾ ಅವರಿಗೆ ಟಿಕೆಟ್ ಕೈ ತಪ್ಪುವ ಸುಳಿವ ಸಿಕ್ಕಿದ್ದು, ತಮ್ಮ ತಾಯಿ ರಂಜಿತಾ ಅವರನ್ನು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಳಿಸುವ ಮೂಲಕ ಪಕ್ಷದ ವಿರುದ್ಧವೇ ಬಂಡಾಯದ ಬಾವುಟ ಹಾರಿಸಲು ಮುಂದಾಗಿದ್ದಾರೆ ಎನ್ನಲಾಗಿದೆ.
ಪಕ್ಷದ ವರಿಷ್ಠರು ತಮಗೆ ಜವಾಬ್ದಾರಿ ನೀಡಲು ವಿಫಲರಾಗಿದ್ದಾರೆ ಎಂದು ಆರೋಪಿಸಿರುವ ರಮ್ಯಾ ಅವರ ತಾಯಿ ರಂಜಿತಾ, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ನಿರ್ಧರಿಸಿದ್ದಾರೆ.
ನಾನು ಕಳೆದ 28 ವರ್ಷಗಳಿಂದ ಕಾಂಗ್ರೆಸ್ ಪಕ್ಷಕ್ಕಾಗಿ ದುಡಿಯುತ್ತಿದ್ದೇನೆ. ಪಕ್ಷದಲ್ಲಿ ಯಾವುದಾದರೂ ಒಂದು ಸಣ್ಣ ಸ್ಥಾನ ಕೊಡಿ ಎಂದು ಮನವಿ ಸಲ್ಲಿಸುತ್ತಾ ಬಂದೆ. ಹಲವು ವರ್ಷ ಕಳೆದರೂ ನನ್ನ ಬೇಡಿಕೆ ಈಡೇರಲಿಲ್ಲ. ನಮ್ಮ ಪಕ್ಷವೇ ಅಧಿಕಾರದಲ್ಲಿದ್ದರೂ ನನಗೆ ಒಂದು ಜವಾಬ್ದಾರಿ ಸಿಗಲಿಲ್ಲ. ಪಕ್ಷದ ಮುಖಂಡರು ಭರವಸೆ ನೀಡುತ್ತಲೇ ದಿನ ದೂಡುತ್ತಾ ಬಂದಿದ್ದಾರೆ. ನಾನು ಎಷ್ಟು ದಿನ ಕಾಯಲಿ? ಹೀಗಾಗಿ ಮುಂದಿನ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವ ಯೋಚನೆ ಮಾಡುತ್ತಿದ್ದೇನೆ. ಈ ಬಗ್ಗೆ ಶೀಘ್ರ ಅಂತಿಮ ನಿರ್ಧಾರ ಪ್ರಕಟಿಸುತ್ತೇನೆ ಎಂದು ರಂಜಿತಾ ಹೇಳಿದ್ದಾರೆ.
ರಮ್ಯಾ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದ್ದ ಸಂದರ್ಭದಲ್ಲಿ ರಂಜಿತಾ ಮಗಳ ಪರ ಪ್ರಚಾರ ನಡೆಸಿದ್ದರು. ರಮ್ಯಾಗೆ ಎಐಸಿಸಿಯಲ್ಲಿ ಸ್ಥಾನ ನೀಡಿ ದೆಹಲಿಗೆ ಕರೆಸಿಕೊಂಡ ನಂತರ ರಂಜಿತಾ ಬೆಂಗಳೂರಿನಲ್ಲಿ ನೆಲೆಸಿದ್ದಾರೆ.