ದೇಶದ ಸಮಗ್ರತೆಗೆ ಬಿಜೆಪಿಯಿಂದ ಧಕ್ಕೆ: ಡಿ.ಕೆ.ಶಿವಕುಮಾರ್
ಚಿಕ್ಕಮಗಳೂರು: ಕೋಮುವಾದ ಮತ್ತು ಬಲಪಂಥೀಯ ಬಿಜೆಪಿ ದೇಶದ ಸಮಗ್ರತೆ ಮತ್ತು ಏಕತೆಗೆ ಮಾರಕವಾಗಿದ್ದು ಬಡವರಿಗಾಗಿ ಇರುವ ಅನ್ನಭಾಗ್ಯ ಯೋಜನೆಯನ್ನು ಕನ್ನ ಭಾಗ್ಯ ಎಂದು ಬಣ್ಣಿಸಿರುವ ಕೇಸರಿ ನಾಯಕರನ್ನು ಇಂಧನ ಖಾತೆ ಸಚಿವ ಡಿ.ಕೆ.ಶಿವಕುಮಾರ್ ಆಪಾದಿಸಿದರು.
ಚಿಕ್ಕಮಗಳೂರಿನ ಮೂಡಿಗೆರೆಯಲ್ಲಿ ನಿನ್ನೆ ಕಾಂಗ್ರೆಸ್ ಪ್ರಚಾರ ರ್ಯಾಲಿಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ದೇಶದ ರೈತರಿಗಾಗಿ ಎನ್ ಡಿಎ ಸರ್ಕಾರ ಏನು ಮಾಡಿದೆ ಎಂದು ಪ್ರಶ್ನಿಸಿದರು. ದಲಿತರ ಕಡೆಗೆ ಬಿಜೆಪಿ ಕಡೆಗೆ ಎಂಬ ಮೂಡಿಗೆರೆ ನಾಯಕರ ಘೋಷವಾಕ್ಯದ ವಿರುದ್ಧ ಹರಿಹಾಯ್ದ ಅವರು ಕೇಂದ್ರ ಸರ್ಕಾರ ಇವರಿಗೆ ಯಾವುದೇ ಯೋಜನೆ ನೀಡುತ್ತಿಲ್ಲ ಎಂದು ದೂರಿದರು.
ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರು ಬರೆದಿರುವ ಸಂವಿಧಾನವನ್ನು ಬದಲಾಯಿಸುವ ಕುರಿತು ಮಾತನಾಡುವ ಕೇಸರಿ ಪಕ್ಷ ಬಿಜೆಪಿ ಖಂಡಿತವಾಗಿಯೂ ದೇಶಕ್ಕೆ ಮಾರಕವಾಗಿದೆ ಎಂದು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಅಧ್ಯಕ್ಷ ಅಮಿತ್ ಶಾರಂತಹ ನೂರು ಜನರು ಬಂದರೂ ಕೂಡ ದೇಶದಿಂದ ಕಾಂಗ್ರೆಸ್ ಪಕ್ಷವನ್ನು ಹೊಡೆದೋಡಿಸುವುದು ಅಸಾಧ್ಯ ಎಂದು ಪ್ರತಿಪಾದಿಸಿದ ವಿಧಾನಪರಿಷತ್ ಸದಸ್ಯ ವಿ.ಎಸ್.ಉಗ್ರಪ್ಪ, ದೇಶದಲ್ಲಿ ಪ್ರಜಾಪ್ರಭುತ್ವ, ಜಾತ್ಯತೀತತೆ ಮತ್ತು ಸಂವಿಧಾನ ಉಳಿಯಬೇಕೆಂದರೆ ಶಾ ಮತ್ತು ಮೋದಿಯವರನ್ನು ಅಧಿಕಾರದಿಂದ ಕಿತ್ತೊಗೆಯಬೇಕು ಎಂದು ಅಭಿಪ್ರಾಯಪಟ್ಟರು.
ಮೋದಿ ಮತ್ತು ಶಾ ಈ ದೇಶದಲ್ಲಿ ಸರ್ವಾಧಿಕಾರಿಗಳಂತೆ ವರ್ತಿಸುತ್ತಿದ್ದಾರೆ. 2011ರಲ್ಲಿ ತಮ್ಮದೇ ಪಕ್ಷದವರಿಂದ ಯಡಿಯೂರಪ್ಪನವರು ಹೊರದಬ್ಬಿಸಿಕೊಂಡರು ಏಕೆಂದು ಜನತೆಗೆ ಹೇಳಲಿ. ಭ್ರಷ್ಟಾಚಾರದ ಬಗ್ಗೆ ಮಾತನಾಡಲು ಮೋದಿ ಮತ್ತು ಅಮಿತ್ ಶಾ ಅರ್ಹರೇ ಎಂದು ಮನವರಿಕೆ ಮಾಡಿಕೊಳ್ಳಲಿ ಎಂದು ಉಗ್ರಪ್ಪ ಹೇಳಿದರು.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ