ಬೆಂಗಳೂರು: ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರನ್ನು ಎರಡು ದಿನಗಳ ಹಿಂದೆ ಶ್ಲಾಘಿಸಿ ಅದಕ್ಕೆ ಹತ್ತಿರವಾದಂತೆ ಕಾಣಿಸಿದ್ದ ಪ್ರಧಾನ ಮಂತ್ರಿ ನರೇಂದ್ರ ಮೋದಿ, ನಿನ್ನ ತಮ್ಮ ನಿಲುವನ್ನು ಬದಲಾಯಿಸಿದ್ದಾರೆ. ಜನರು ಜೆಡಿಎಸ್ ಗೆ ಮತ ಚಲಾಯಿಸಿ ತಮ್ಮ ಅಮೂಲ್ಯ ಮತಗಳನ್ನು ಹಾಳುಮಾಡಬೇಡಿ ಎಂದಿದ್ದಾರೆ.
ಪ್ರಧಾನಿಯವರು ಎರಡು ದಿನಗಳ ಹಿಂದೆ ದೇವೇಗೌಡರನ್ನು ಹೊಗಳಿದಾಗ ಈ ಚುನಾವಣೆಯಲ್ಲಿ ಬಿಜೆಪಿ ಮಟ್ಟು ಜೆಡಿಎಸ್ ರಹಸ್ಯವಾಗಿ ಮೈತ್ರಿ ಮಾಡಿಕೊಂಡಿದೆ. ಇಬ್ಬರ ನಡುವೆ ಅಪವಿತ್ರ ಹೊಂದಾಣಿಕೆಯಾಗಿದೆ ಎಂದೇ ಜನತೆ ಮಾತನಾಡಿಕೊಳ್ಳುತ್ತಿದ್ದರು.
ನಿನ್ನೆ ಬೆಂಗಳೂರಿನಲ್ಲಿ ರ್ಯಾಲಿಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಭ್ರಷ್ಟಾಚಾರದಲ್ಲಿ ಕಾಂಗ್ರೆಸ್ ಗೆ ಚಿನ್ನದ ಪದಕ ನೀಡಬೇಕು. ರಾಷ್ಟ್ರೀಯ ಭದ್ರತೆಗೆ ಬೆದರಿಕೆಯನ್ನು ನೀಡುವ ಮೂಲಭೂತವಾದಿ ಕೋಮುವಾದಿಗಳ ಜೊತೆ ಜೆಡಿ (ಎಸ್) ಒಪ್ಪಂದ ಮಾಡಿಕೊಂಡಿದೆ. ಇಂತಹ ಸಂದರ್ಭದಲ್ಲಿ ಬಿಜೆಪಿ ಮಾತ್ರ ಅಭಿವೃದ್ಧಿಪರ ಸರ್ಕಾರವನ್ನು ಜನತೆಗೆ ನೀಡಲಿದೆ ಎಂದು ಸಾರಿದರು.
ಜೆಡಿಎಸ್ ಗೆ ಮತ ಹಾಕಿ ನಿಮ್ಮ ಅಮೂಲ್ಯ ಮತಗಳನ್ನು ಹಾಳುಮಾಡಿಕೊಳ್ಳಬೇಡಿ ಎಂದು ಜನತೆಯನ್ನು ಕೇಳಿಕೊಳ್ಳುತ್ತೇನೆ. ನೀವು ಯಾವ ರಾಜಕೀಯ ಪಂಡಿತರನ್ನು ಬೇಕಾದರೂ ಕೇಳಿ, ಜೆಡಿಎಸ್ ಮುಂಬರುವ ಚುನಾವಣೆಯಲ್ಲಿ ಮೂರನೇ ಸ್ಥಾನಕ್ಕೆ ಜಾರಲಿದೆ. ಸೂಕ್ಷ್ಮ ಮತದಾರರು ಜೆಡಿಎಸ್ ಗೆ ಮತ ಹಾಕಲು ಸಾಧ್ಯವಿಲ್ಲ ಎಂದು ಜೆಡಿಎಸ್ ವಿರುದ್ಧ ನೇರ ವಾಗ್ದಾಳಿ ನಡೆಸಿದರು.
ಮೇ 1ರಂದು ಚಾಮರಾಜನಗರ ಜಿಲ್ಲೆಯಲ್ಲಿ ಮಾತನಾಡಿದ್ದ ಮೋದಿ, ದೇವೇಗೌಡರಿಗೆ ಕಾಂಗ್ರೆಸ್ ಅಗೌರವ ತೋರುತ್ತಿದೆ ಎಂದು ಹೇಳಿದ್ದು ಚುನಾವಣೋತ್ತರ ಮೈತ್ರಿ ಸಾಧ್ಯತೆಯ ಸಂಶಯವನ್ನು ಹುಟ್ಟುಹಾಕಿತ್ತು. ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬಿಜೆಪಿ ಮತ್ತು ಜೆಡಿಎಸ್ ಒಳ ಒಪ್ಪಂದ ಮಾಡಿಕೊಂಡಿದೆ ಎಂದೇ ಹೇಳುತ್ತಿದ್ದರು.
ತಮ್ಮ ಮೇಲೆ ಹಠಾತ್ ಕಾಳಜಿ ಪ್ರಧಾನಿಯವರಿಗೆ ಬಂದಿರುವುದೇಕೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿಯವರು ಸಂಶಯ ವ್ಯಕ್ತಪಡಿಸಿದ ಕೂಡಲೇ ಮೋದಿಯವರು ಜೆಡಿಎಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
Advertisement