ಹುಬ್ಬಳ್ಳಿ: ಕರ್ನಾಟಕ ವಿಧಾನಸಭೆ ಚುನಾವಣೆಗೆ ಮೇ 12ರಂದು ಮತದಾನ ನಡೆಯಲಿದ್ದು ಈ ಬಾರಿ ಬಿಜೆಪಿಗೆ ಬದಲು ಜಾತ್ಯಾತೀತ ಪಕ್ಷಗಳಿಗೆ ಮತ ನೀಡುವಂತೆ ಗುಜರಾತ್ ಶಾಸಕ ಮತ್ತು ದಲಿತ ಮುಖಂಡ ಜಿಗ್ನೇಶ್ ಮೇವಾನಿ ಕರೆ ನೀಡಿದ್ದಾರೆ.
ಸಂವಿಧಾನದ ಉಳಿವಿಗಾಗಿ ಎಂಬ ಪ್ರಚಾರ ಕಾರ್ಯಕ್ರಮದಲ್ಲಿ ಸಫಾಯಿ ಕರ್ಮಚಾರಿಗಳ ಜತೆ ಮಾತನಾಡಿದ ಜಿಗ್ನೇಶ್ ಮೇವಾನಿ ಕರ್ನಾಟಕ ಜನತೆ ಬಿಜೆಪಿ(ಕಳ್ಳ ಕಾವಲುಗಾರ)ಗೆ ಮತ ನೀಡಬೇಡಿ. ಅದರ ಬದಲಿಗೆ ಜಾತ್ಯಾತೀತ ಪಕ್ಷಗಳಿಗೆ ಮತ ನೀಡುವಂತೆ ತಿಳಿಸಿದ್ದಾರೆ.
ಕಳ್ಳ ಕಾವಲುಗಾರ(ಪ್ರಧಾನಮಂತ್ರಿ ನರೇಂದ್ರ ಮೋದಿ) ಬಡವರಿಂದ ಹಣವನ್ನು ದೋಚಿ ಶ್ರೀಮಂತರಿಗೆ ನೀಡುತ್ತಿದ್ದಾರೆ. ಇಂತಹವರ ಪಕ್ಷಕ್ಕೆ ಮತ ನೀಡಬೇಡಿ ಎಂದು ಹೇಳಿದ್ದಾರೆ.
ಬಿಜೆಪಿ ಯಾವಾಗಲೂ ದಲಿತರನ್ನು ವಿರೋಧಿಸುತ್ತದೆ. ವಂಚಿತ ಸಮುದಾಯದ ಅಭಿವೃದ್ಧಿಯನ್ನು ಬಯಸುವುದಿಲ್ಲ. ನಿಮ್ಮನ್ನು ಕಸ ಎತ್ತುವವರಂತೆ ನೋಡಲು ಬಯಸುತ್ತದೆ. ಮೇ 12ರಂದು ಬಿಜೆಪಿಗೆ ಮತ ನೀಡಿದರೆ ಅವರು ನಮ್ಮ ಜೀವನವನ್ನು ಇನ್ನಷ್ಟು ಅಸಹನೀಯವಾಗಿಸುತ್ತಾರೆ ಎಂದು ಹೇಳಿದರು.