ಕೈ ಹಿಡಿಯಲಿಲ್ಲ ಗ್ಲಾಮರ್: ಚುನಾವಣೆಯಲ್ಲಿ 'ಬಣ್ಣ' ಕಳೆದುಕೊಂಡ ಸಿನಿಮಾ ತಾರೆಗಳು!

ಚುನಾವಣೆಯಲ್ಲಿ ಸ್ಪರ್ದಿಸಿದ್ದ ಹಲವು ನಟರಲ್ಲಿ ಕೇವಲ ಕುಮಾರ್ ಬಂಗಾರಪ್ಪ ಮಾತ್ರ ಗೆಲುವು ಸಾಧಿಸಿದ್ದಾರೆ.ಹಲವು ಸಿನಿಮಾ ಕಲಾವಿದರು ಈ ಬಾರಿ ಚುನಾವಣೆಯಲ್ಲಿ ..
ಸಿನಿಮಾ ಕಲಾವಿದರು
ಸಿನಿಮಾ ಕಲಾವಿದರು
ಬೆಂಗಳೂರು: ಹಲವು ಸಿನಿಮಾ ಕಲಾವಿದರು ಈ ಬಾರಿ ಚುನಾವಣೆಯಲ್ಲಿ  ಸೋಲಿನ ರುಚಿ ನೋಡಿದ್ದಾರೆ. ಚುನಾವಣೆಯಲ್ಲಿ ಸ್ಪರ್ದಿಸಿದ್ದ ಹಲವು ನಟರಲ್ಲಿ ಕೇವಲ ಕುಮಾರ್ ಬಂಗಾರಪ್ಪ ಮಾತ್ರ ಗೆಲುವು ಸಾಧಿಸಿದ್ದಾರೆ.
ಕನ್ನಡ ಸಿನಿಮಾ ರಂಗಕ್ಕೂ ಹಾಗೂ ರಾಜಕೀಯಕ್ಕೂ ನಂಟು ಹೊಸತಲ್ಲ,  ಹಲವು ಸಿನಿಮಾ ನಟರು ಈಗಾಗಲೇ ರಾಜಕೀಯದಲ್ಲಿ ಯಶಸ್ಸು ಕಂಡಿದ್ದಾರೆ, ಆದರೆ ಈ ಬಾರೀ ಮಾತ್ರ ಕುಮಾರ್ ಬಂಗಾರಪ್ಪ ಹೊರತು ಪಡಿಸಿದರೇ ಸ್ಪರ್ಧಿಸಿದ್ದ ಕಲಾವಿದರೆಲ್ಲಾ ವಿಧಾನ ಸೌಧ ಪ್ರವೇಶಿಸಲು ವಿಫಲರಾಗಿದ್ದಾರೆ.
ಮಂಡ್ಯದಿಂದ ಸ್ಪರ್ದಿಸಬೇಕಿದ್ದ ಅಂಬರೀಷ್ ಸಿದ್ದರಾಮಯ್ಯ ಜೊತೆಗಿನ ಮುನಿಸಿನಿಂದ ಕಣಕ್ಕಿಳಿಯಲಿಲ್ಲ, ಆದರೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆಯಾಗಿದ್ದ ಉಮಾಶ್ರೀ ತೇರದಾಳ ಕ್ಷೇತ್ರದಿಂದ 20,888 ಮತಗಳಿಂದ ಬಿಜೆಪಿಯ ಸಿದ್ದು ಸವದಿ ವಿರುದ್ಧ ಸೋತಿದ್ದಾರೆ.
ಬೆಂಗಳೂರಿನಲ್ಲಿ ನವರಸ ನಾಯಕ ಜಗ್ಗೇಶ್ ಯಶವಂತಪುರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಆದರೆ ಕಾಂಗ್ರೆಸ್ ನ ಎಸ್.ಟಿ ಸೋಮಶೇಖರ್ ವಿರುದ್ಧ ಹೀನಾಯ ಸೋಲನುಭವಿಸಿದ್ದಾರೆ. 2008 ರಲ್ಲಿ ಜಗ್ಗೇಶ್ ತುರುವೆಕೆರೆಯಿಂದ ಕಾಂಗ್ರೆಸ್ ನಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು.
 ಇನ್ನೂ ಬಾಗೇಪಲ್ಲಿಯಿಂದ ಸ್ಪರ್ಧಿಸಿದ್ದ ನಟ ಸಾಯಿಕುಮಾರ್ ಸೋಲು ಶೋಚನೀಯವಾಗಿದೆ. 2008 ರಲ್ಲಿ ಕಡಿಮೆ ಮತಗಳ ಅಂತರದಿಂದ ಸೋತಿದ್ದ ಸಾಯಿಕುಮಾರ್ ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ ಸುಬ್ಬಾರೆಡ್ಡಿ ವಿರುದ್ಧ ಸೋತಿದ್ದಾರೆ.
ಈ ಮೊದಲು ಸಂಸದರಾಗಿದ್ದ ನಟ ಶಶಿಕುಮಾರ್ 2006 ರಲ್ಲಿ ಕಾಂಗ್ರೆಸ್ ಸೇರಿದ್ದರು,  ಆದರೆ ಈ ಬಾರಿ ಕಾಂಗ್ರೆಸ್ ಟಿಕೆಟ್ ನೀಡಿರಲಿಲ್ಲ, ಹೀಗಾಗಿ ಜೆಡಿಎಸ್ ಗೆ ಸೇರಿ  ಹೊಸದುರ್ಗದಿಂದ ಸ್ಪರ್ದಿಸಿದ್ದರು, ಬಿಜೆಪಿಯ ಗೂಳಿಹಟ್ಟಿ ಶೇಕರ್ ವಿರುದ್ಧ ಸೋಲನುಭವಿಸಿದ್ದಾರೆ.
ಸಿನಿಮಾ ರಂಗವೇ ಬೇರೆ, ರಾಜಕೀಯವೇ ಬೇರೆ,  ರಾಜಕೀಯ ನೇತಾರರಿಂದ ಜನ ಬೇರೆಯದನ್ನೇ ಬಯಸುತ್ತಾರೆ, ಮತದಾರರು ಪ್ರೇಕ್ಷಕರಾಗಲು ಸಾಧ್ಯವಿಲ್ಲ ಎಂದು ಬಿಜೆಪಿಯ ಹಿರಿಯ ನಾಯಕರೊಬ್ಬರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com