ಹೈದರಾಬಾದ್: ಜೆಡಿಎಸ್ ನಾಯಕ ಎಚ್ ಡಿ ಕುಮಾರಸ್ವಾಮಿ ಅವರು ನಾಳೆ ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುತ್ತಿರುವುದು ಜಾತ್ಯತೀತ ಮತ್ತು ಬಿಜೆಪಿ ವಿರುದ್ಧ ತೃತೀಯ ರಂಗ ರಚನೆಗೆ ಮುನ್ನುಡಿಯಾಗಲಿದೆ ಎಂದು ಹಿರಿಯ ಕಾಂಗ್ರೆಸ್ ನಾಯಕ ಎಂ.ವೀರಪ್ಪ ಮೊಯ್ಲಿ ಅವರು ಮಂಗಳವಾರ ಹೇಳಿದ್ದಾರೆ.
ನಾಳೆ ಬೆಂಗಳೂರಿನಲ್ಲಿ ನಡೆಯುವ ಕುಮಾರಸ್ವಾಮಿ ಪ್ರಮಾಣವಚನ ಸಮಾಂಭರದಲ್ಲಿ ಪ್ರತಿಪಕ್ಷಗಳ ನಾಯಕರ ದಂಡೇ ಭಾಗವಹಿಸುತ್ತಿದ್ದು, ಹೊಸ ರಂಗ ರಚನೆಗೆ ನಿಜವಾಗಿಯೂ ಅದೊಂದು ಮುಂಚೂಣಿ ಸಭೆ ಆಗಲಿದೆ ಎಂದು ಮಾಜಿ ಮುಖ್ಯಮಂತ್ರಿ ತಿಳಿಸಿದ್ದಾರೆ.
ಇದುವರೆಗೆ ಒಂದು ಬಾರಿಯೂ ಒಗ್ಗಟ್ಟಾಗದ ಹಲವು ಪ್ರತಿಪಕ್ಷ ನಾಯಕರು ಇದೇ ಮೊದಲ ಬಾರಿಗೆ ಒಗ್ಗಟ್ಟಾಗುತ್ತಿದ್ದಾರೆ. ಇದು ಬಿಜೆಪಿ ವಿರೋಧಿ ರಂಗ ರಚನೆಯ ಸ್ಪಷ್ಟ ಸೂಚನೆ ಮತ್ತು ದೇಶದಲ್ಲಿ ಜಾತ್ಯತೀತ ರಂಗಕ್ಕೆ ಮುನ್ನುಡಿಯಾಗಲಿದೆ ಎಂದಿದ್ದಾರೆ.
ಕರ್ನಾಟಕದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಒಂದಾಗಿರುವುದು ಮೈಲಿಗಲ್ಲಾಗಿದ್ದು, ಬಿಜೆಪಿ ವಿರೋಧಿ ರಾಜಕೀಯ ಶಕ್ತಿಗಳು ಒಂದಾಗಲು ಉತ್ತಮ ಆರಂಭ ಸಿಕ್ಕಿದೆ ಎಂದು ವೀರಪ್ಪ ಮೊಯ್ಲಿ ಹೇಳಿದ್ದಾರೆ.
ಇತ್ತೀಚಿಗೆ ನಡೆದ ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಮತ್ತು ಕರ್ನಾಟಕದಲ್ಲಿ ಪ್ರಧಾನಿ ನರೇಂದ್ರ ಮೋದಿಯ ಅಲೆ ಇಲ್ಲ ಎಂಬುದು ಸ್ಪಷ್ಟವಾಗಿದೆ ಎಂದು ಮೊಯ್ಲಿ ತಿಳಿಸಿದರು.