ಬೆಂಗಳೂರು: ರಾಜ್ಯದ ಜನತೆಗೆ ತಾವು ನೀಡಿದ ಎಲ್ಲಾ ಭರವಸೆಗಳನ್ನು ಈಡೇರಿಸುವುದಾಗಿ ಶುಕ್ರವಾರ ವಿಶ್ವಾಸಮತ ಗೆದ್ದ ನೂತನ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಹೇಳಿದ್ದಾರೆ.
ರೈತರ ಸಾಲ ಮನ್ನಾಗೆ ಒತ್ತಾಯಿಸಿ ಬಿಜೆಪಿ ಮೇ 28ರಂದು ರಾಜ್ಯ ಬಂದ್ ಗೆ ಕರೆ ನೀಡಿರುವುದರ ಬಗ್ಗೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ನಿಜವಾದ ಕಾರ್ಯ ಈಗ ಆರಂಭವಾಗಿದೆ. ರಾಜ್ಯದ ಜನತೆಗೆ ನೀಡಿದ ಎಲ್ಲಾ ಭರವಸೆಗಳನ್ನು ಈಡೇರಿಸುತ್ತೇನೆ ಎಂದು ಕುಮಾರಸ್ವಾಮಿ ಎಎನ್ಐಗೆ ತಿಳಿಸಿದ್ದಾರೆ.
ಇದಕ್ಕು ಮುನ್ನ ವಿಶ್ವಾಸಮತ ಯಾಚನೆ ಪ್ರಸ್ತಾಪ ಮಂಡಿಸಿ ಸದನದಲ್ಲಿ ಮಾತನಾಡಿದ್ದ ಮುಖ್ಯಮಂತ್ರಿ ಕುಮಾರಸ್ವಾಮಿ, ರಾಜ್ಯದ ಜನ ನನಗೆ ಸಂಪೂರ್ಣ ಬಹುಮತ ನೀಡದಿರುವ ಬಗ್ಗೆ ನನಗೂ ನೋವಿದೆ. ಆದರೂ ನಾವು ಐದು ವರ್ಷ ಸ್ಥಿರ ಸರ್ಕಾರ ನೀಡುತ್ತೇವೆ ಎಂದು ಹೇಳಿದ್ದರು.
ಮೇ 23ರಂದು ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದ ಕುಮಾರಸ್ವಾಮಿ ಅವರು ಇಂದು ವಿಧಾನಸಭೆಯಲ್ಲಿ ಬಿಜೆಪಿ ಸಭಾತ್ಯಾಗದ ನಡುವೆಯೇ ವಿಶ್ವಾಸ ಮತ ಸಾಬೀತುಪಡಿಸಿದ್ದಾರೆ.