ಹಾಸನ: ಲೋಕೋಪಯೋಗಿ ಸಚಿವ ಹೆಚ್ ಡಿ ರೇವಣ್ಣ ಅವರನ್ನು ಸಚಿವೆ ಜಯಮಾಲಾ ಹೊಗಳಿರುವುದು ಇದೀಗ ಹಾಸನ ಜಿಲ್ಲೆಯ ಕಾಂಗ್ರೆಸ್ ನಾಯಕರ ಸಿಟ್ಟು, ಆಕ್ರೋಶಕ್ಕೆ ಕಾರಣವಾಗಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಮಾಜಿ ಸಚಿವ ಜಿಲ್ಲೆಯ ಕಾಂಗ್ರೆಸ್ ನಾಯಕ ಎ ಮಂಜು, ಸಚಿವೆ ಜಯಮಾಲಾ ಶ್ರವಣಬೆಳಗೊಳಕ್ಕೆ ಬಂದಿರುವುದು ಸರ್ಕಾರದ ಕಾರ್ಯಕ್ರಮಕ್ಕಾಗಿ ಸಚಿವೆಯಾಗಿ, ಅಲ್ಲಿಗೆ ಬಂದಿರುವ ಪ್ರಸ್ತುತತೆಯನ್ನು ಅವರು ಅರ್ಥ ಮಾಡಿಕೊಂಡು ಅಷ್ಟು ಕೆಲಸ ಮಾಡಿ ಹೋಗಬೇಕಿತ್ತು. ಅದು ಬಿಟ್ಟು ಸಚಿವ ರೇವಣ್ಣನವರ ಏಜೆಂಟರಾಗಿ ಅಲ್ಲಿಗೆ ಬಂದಿದ್ದಲ್ಲ ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ರಾಜಕೀಯವೆಂದರೆ ಸಿನಿಮಾವಲ್ಲ, ಸಿನಿಮಾದಲ್ಲಿ ಡೈಲಾಗ್ ಹೊಡೆದ ರೀತಿ ಇಲ್ಲಿ ಮಾತನಾಡಲಾಗುವುದಿಲ್ಲ, ಸಿನಿಮಾದಲ್ಲಿ ತಾವು ಎವರ್ ಗ್ರೀನ್ ತಾರೆ ಎಂದು ಅವರು ಹೇಳಿಕೊಳ್ಳಬಹುದು. ಆದರೆ ರಾಜಕೀಯದಲ್ಲಿ ಅವೆಲ್ಲ ನಡೆಯುವುದಿಲ್ಲ, ಇಂಥ ಅನನುಭವಿಗಳು ಮಂತ್ರಿಯಾಗುವುದಕ್ಕೆ ನಾಲಾಯಕ್, ಕಾಂಗ್ರೆಸ್ ನಲ್ಲಿದ್ದುಕೊಂಡು ಅವರು ಈ ರೀತಿ ಹೇಳಿಕೆ ನೀಡುವುದು ಪಕ್ಷಕ್ಕೆ ಅವಮಾನ ಮಾಡಿದಂತೆ ಎಂದು ಟೀಕಿಸಿದ್ದಾರೆ.
ಸಚಿವೆ ಜಯಮಾಲಾ ಹೇಳಿರುವುದನ್ನು ಇಲ್ಲಿಗೆ ಸುಮ್ಮನೆ ಬಿಡುವುದಿಲ್ಲ, ಇದನ್ನು ಪಕ್ಷದ ವರಿಷ್ಠರ ಗಮನಕ್ಕೆ ತರುತ್ತೇನೆ, ಅವರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲು ಒತ್ತಾಯಿಸುತ್ತೇವೆ, ರಾಜ್ಯದ ಮಂತ್ರಿಯಾಗಿ ಅವರು ಈ ರೀತಿ ಮಾತನಾಡುವುದು ಶುದ್ಧ ತಪ್ಪು, ಈ ಬಗ್ಗೆ ಅವರು ಬೇಷರತ್ ಕ್ಷಮೆಯಾಚಿಸಬೇಕು ಎಂದು ಎ ಮಂಜು ಸಚಿವೆ ಜಯಮಾಲಾ ಅವರನ್ನು ಆಗ್ರಹಿಸಿದ್ದಾರೆ.
Advertisement