ಜಮಖಂಡಿ(ಬಾಗಲಕೋಟೆ): ಮೈಸೂರು ಕೊಡಗು ಕ್ಷೇತ್ರದ ಸಂಸದ ಪ್ರತಾಪ್ ಸಿಂಹನ ಮಾತನ್ನು ಏಕೆ ಗಂಭೀರವಾಗಿ ತೆಗೆದುಕೊಳ್ಳುತ್ತೀರಿ? ಆತ 2019ರಲ್ಲಿ ಮನೆಗೆ ಹೋಗ್ತಾನೆ ಎಂದು ಬಾಗಲಕೋಟೆಯ ಜಮಖಂಡಿ ತಾಲೂಕಿನ ಹಿರೇಪಡಸಲಗಿಯಲ್ಲಿ ಉಪಚುನಾವಣೆ ಪ್ರಚಾರ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಕಾಂಗ್ರೆಸ್-ಜೆಡಿಎಸ್ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಭವಿಷ್ಯ ನುಡಿದಿದ್ದಾರೆ.
ಕುಮಾರಸ್ವಾಮಿ ಅವರಪ್ಪನಾಣೆಗೂ ಸಿಎಂ ಆಗುವುದಿಲ್ಲ ಎಂದು ಹೇಳಿದ್ದ ಸಿದ್ದರಾಮಯ್ಯ ಸರ್ಕಾರ ರಚನೆ ಸಂದರ್ಭದಲ್ಲಿ ಸ್ವಾಭಿಮಾನ ಬಿಟ್ಟು ದೇವೇಗೌಡರ ಬಳಿ ಹೋಗಿದ್ದಾರೆ ಎಂಬ ಸಂಸದ ಪ್ರತಾಪ್ ಸಿಂಹ ಟೀಕೆ ಕುರಿತು ನಿನ್ನೆ ಜಮಖಂಡಿಯಲ್ಲಿ ಸುದ್ದಿಗಾರರು ಪ್ರತಿಕ್ರಿಯೆ ಕೇಳಿದಾಗ, ಅಯ್ಯೋ... ಆತನ ಬಗ್ಗೆ ಯಾಕ್ರೀ ಮಾತಾಡ್ತೀರ' ಮುಂದಿನ ಎಲೆಕ್ಷನ್ ನಲ್ಲಿ ಆತ ಗೆದ್ದು ಬರೋದೆ ಇಲ್ಲ, ಮನೆಗೆ ಹೋಗುತ್ತಾನೆ ಎಂದು ಟೀಕಿಸಿದ್ದಾರೆ.
ಸಿಬಿಐ ಆಂತರಿಕ ಬಿಕ್ಕಟ್ಟಿನಲ್ಲಿ ಕೇಂದ್ರ ಸರ್ಕಾರದ ಹಸ್ತಕ್ಷೇಪ ವಿಚಾರವಾಗಿ ಮಾತನಾಡಿದ ಅವರು, ಸಿಬಿಐ ಸಂಸ್ಥೆಯಲ್ಲಿ ಏನೆಲ್ಲ ಬೆಳವಣಿಗೆಗಳು ಆಗಿವೆಯೋ ಅದಕ್ಕೆಲ್ಲ ಪ್ರಧಾನಿ ನರೇಂದ್ರ ಮೋದಿಯವರೇ ಕಾರಣ. ತನಿಖಾ ಸಂಸ್ಥೆಗಳು ಸ್ವತಂತ್ರವಾಗಿ ಕೆಲಸ ಮಾಡುವ ಸಂಸ್ಥೆಗಳು. ಅದರೊಳಗೆ ಕೇಂದ್ರ ಸರ್ಕಾರ ಹಸ್ತಕ್ಷೇಪ ಮಾಡಿ ವ್ಯವಸ್ಥೆಯನ್ನು ಹಾಳು ಮಾಡುತ್ತಿದೆ. ಇದೀಗ ತಮಗೆ ಬೇಕಾದವರನ್ನು ಸಿಬಿಐಯಲ್ಲಿ ಕೂರಿಸಿರುವ ಕೇಂದ್ರ ಸರ್ಕಾರದ ಬಗ್ಗೆ ಜನರು ಅಸಮಾಧಾನ ತಳೆದಿದ್ದಾರೆ ಎಂದರು.
ನಿನ್ನೆ ಜಮಖಂಡಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಶ್ರೀಕಾಂತ ಕುಲಕರ್ಣಿ ಪರ ಸಂಸದ ಪ್ರತಾಪ ಸಿಂಹ ಕೂಡ ಪ್ರಚಾರ ನಡೆಸಿದ್ದಾರೆ. ಕಾಂಗ್ರೆಸ್-ಜೆಡಿಎಸ್ ಮೈತ್ರಿಯಾಗಿ ಕಾಂಗ್ರೆಸ್ ನ ಆನಂದ್ ಸಿದ್ದು ನ್ಯಾಮೇಗೌಡ ಕಣಕ್ಕಿಳಿದಿದ್ದಾರೆ.
Advertisement