ಬೆಂಗಳೂರು: ರಾಜ್ಯದಲ್ಲಿ ನದ್ಯ ನಡೆಯುತ್ತಿರುವ ರಾಜಕೀಯ ಆಗು ಹೋಗುಗಳನ್ನು ಮಾಧ್ಯಮಗಳು ತಪ್ಪಾಗಿ ವರದಿ ಮಾಡುತ್ತಿವೆ. ಮಾಧ್ಯಮಗಳಿಗೆ ಸತ್ಯವನ್ನು ಪ್ರಸಾರ ಮಾಡುವ ಹೊಣೆಗಾರಿಕೆ ಇರಬೇಕು, ಕೆಲ ಮಾಧ್ಯಮ ಸಂಸ್ಥೆಗಳ ಉದ್ದೇಶ ಏನು ಎಂಬುದರ ಬಗ್ಗೆ ನಾವು ಪ್ರಶ್ನೆ ಮಾಡಬೇಕಾಗುತ್ತದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಕಿಡಿಕಾರಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಸರ್ಕಾರವನ್ನು ಬೀಳಿಸಲು ಕೆಲ ಮಾಧ್ಯಮಗಳು ಪ್ರಯತ್ನ ನಡೆಸುತ್ತಿರುವಂತೆ ಕಾಣುತ್ತಿದೆ, ನೀವು ರಾಜಕೀಯ ಪಕ್ಷವೊಂದರ ಭಾಗವಾಗಿದ್ದೀರಾ? ಕಾಂಗ್ರೆಸ್ ಮತ್ತು ಜೆಡಿಎಸ್ ನ ಕೆಲ ಶಾಸಕರನ್ನು ಮುಂಬಯಿಗೆ ಕರೆದೊಯ್ಯಲಾಗಿದೆ ಎಂದು ವರದಿ ಮಾಡುತ್ತೀವೆ. ಈ ರೀತಿಯ ಅರ್ಥವಿಲ್ಲದ ವರದಿ ಮಾಡಿದರೇ ಅಂತಹ ಮಾಧ್ಯಮ ಸಂಸ್ಥೆಗಳ ವಿರುದ್ದ ಮಾನನಷ್ಟ ಮೊಕದ್ದಮೆ ಹೂಡಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ತಮ್ಮದೇ ಪಕ್ಷದ ಕೆಲವರು ಮಾಧ್ಯಮಗಳಿಗೆ ತಪ್ಪು ಮಾಹಿತಿ ನೀಡುತ್ತಿದ್ದಾರೆ ಎಂಬದು ದಿನೇಶ್ ಗಮನಕ್ಕೆ ಬಂತು. ಶಾಸಕ ಎಂಟಿಬಿ ನಾಗರಾಜ್ ಅವರೇ ನೇರವಾಗಿ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದರು, ತಮ್ಮನ್ನು ಸಂಪುಟಕ್ಕೆ ಸೇರಿಸಿಕೊಳ್ಳದಿದ್ದರೇ ಪಕ್ಷ ತ್ಯಜಿಸುವುದಾಗಿ ಹೇಳಿದ್ದರು. ಆ ಹೇಳಿಕೆಯ ದಾಖಲೆ ನಮ್ಮ ಬಳಿಯಿದೆ ಎಂದು ಪತ್ರಕರ್ತರು ದಿನೇಶ್ ಗುಂಡೂರಾವ್ ವಿರುದ್ಧ ಹರಿಹಾಯ್ದರು.
ಕಾಂಗ್ರೆಸ್ ಪಕ್ಷದ ನಾಯಕರು ಮಾಧ್ಯಮವನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ, ಖಾಸಗಿಯಾಗಿ ಹಾಗೂ ಸಾರ್ವಜನಿಕವಾಗಿ ವಿರೋಧಾಭಾಸವಾಗುವಂತ ಹೇಳಿಕೆ ನೀಡುತ್ತಿದ್ದಾರೆ ಎಂದು ಮಾಧ್ಯಮ ಪ್ರತಿನಿಧಿಗಳು ಕೂಡ ದಿನೇಶ್ ಗುಂಡೂರಾವ್ ವಿರುದ್ದ ಆರೋಪ ಮಾಡಿದರು.
ಈ ವೇಳೆ ಮಾತನಾಡಿದ ದಿನೇಶ್, ನಾನು ಕೆಲ ಚಾನೆಲ್ ಗಳ ವಿರುದ್ಧ ಗಂಭೀರ ಆರೋಪ ಮಾಡುತ್ತಿದ್ದೇನೆ, ಕೆಲ ಚಾನೆಲ್ ಗಳು ಬಿಜೆಪಿ ವಕ್ತಾರರಂತೆ ಕೆಲಸ ಮಾಡುತ್ತಿವೆ, ಈ ರೀತಿ ವರ್ತನೆ ಮುಂದುವರಿದರೇ ಮಾನನಷ್ಟ ಮೊಕದ್ದಮೆ ಹೂಡುತ್ತೇವೆ ಎಂದು ದಿನೇಶ್ ಪುನರುಚ್ಚರಿಸಿದರು.