ಬೆಂಗಳೂರು: ಹಾಲಿ ಬಿಜೆಪಿ ಸರ್ಕಾರದಲ್ಲಿ ನಾನು ಯಾವುದೇ ಕಾರಣಕ್ಕೂ ಉಪಮುಖ್ಯಮಂತ್ರಿ ಆಗುವುದಿಲ್ಲ ಮತ್ತು ಉಪ ಚುನಾವಣೆಯಲ್ಲಿ ಪರಾಭವಗೊಂಡವರಿಗೆ ಮಂತ್ರಿ ಸ್ಥಾನ ದೊರೆಯುವುದಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಗುರುವಾರ ಹೇಳಿದ್ದಾರೆ.
ಇಂದು ವಿಧಾನಸೌಧದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಈಗಿನ ಪರಿಸ್ಥಿತಿಯಲ್ಲಿ ನನಗೆ ಉಪಮುಖ್ಯಮಂತ್ರಿಯಾಗುವ ಅವಕಾಶವಿಲ್ಲ. ಹೀಗಾಗಿ ಡಿಸಿಎಂ ಹುದ್ದೆ ಕೊಡಿ ಎಂದು ಕೇಳುವುದೂ ಇಲ್ಲ. ಸರ್ಕಾರ ಸುಗಮವಾಗಿ ಮುನ್ನಡೆಯಲು ಪೂರ್ಣ ಸಹಕಾರ ಕೊಡಬೇಕು. ಇಂತಹ ಪರಿಸ್ಥಿತಿಲ್ಲಿ ಈಶ್ವರಪ್ಪ ಉಪಮುಖ್ಯಮಂತ್ರಿಯಾಗಬೇಕು ಎನ್ನುವುದು ಮುಖ್ಯವಲ್ಲ ಎಂದರು.
ಉಪಚುನಾವಣೆ ಫಲಿತಾಂಶಕ್ಕೆ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಸಂತೋಷ ಪಟ್ಟಿದ್ದಾರೆ. ಹೀಗಾಗಿ ಸರ್ಕಾರ ರಚನೆಗೆ ಮೊದಲ ಆದ್ಯತೆ ನೀಡಲಿದ್ದೇವೆ. ಸಂಪುಟ ವಿಸ್ತರಣೆ ಯಾವಾಗ ಎಂಬುದು ಗೊತ್ತಿಲ್ಲ. ಇಷ್ಟರಲ್ಲೇ ವಿಸ್ತರಣೆಯಾಗಲಿದ್ದು, ಗೆದ್ದವರಿಗೆ ಎಲ್ಲರಿಗೂ ಅವಕಾಶ ಸಿಗುತ್ತದೆ. ವಿಳಂಬವಾದರೂ ಎಲ್ಲವೂ ಸರಿಹೋಗುತ್ತದೆ. ಸೋತವರಿಗೆ ಸಚಿವ ಸ್ಥಾನ ಸಿಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ರಾಮನಗರಕ್ಕೆ ಕೊಟ್ಟ ಅನುದಾನ ವಾಪಸು ಪಡೆದ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್, ಜೆಡಿಎಸ್ ಎಂಬ ಬೇಧಭಾವ ಮಾಡುವುದಿಲ್ಲ. ರಾಜ್ಯದ ಅಭಿವೃದ್ಧಿಯಷ್ಟೇ ನಮಗೆ ಮುಖ್ಯ. ಎಲ್ಲ ಶಾಸಕರಿಗೂ ನಾವು ನೆರವು ಕೊಟ್ಟಿದ್ದೇವೆ ಎಂದು ಸ್ಪಷ್ಟ ಉತ್ತರ ನೀಡದೇ ನುಣುಚಿಕೊಂಡರು.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆದಷ್ಟು ಬೇಗ ಗುಣಮುಖರಾಗಲಿ ಎಂದು ಹಾರೈಸಿದ ಈಶ್ವರಪ್ಪ, ರಾಜಕೀಯ ಬೇರೆ, ಸ್ನೇಹ ಸಂಬಂಧಗಳು ಬೇರೆ. ನನ್ನ ಪ್ರಾಣ ಹೋದರೂ ಪಕ್ಷದ ವಿಚಾರದಲ್ಲಿ ಬದಲಾವಣೆ ಇಲ್ಲ. ಸಿದ್ದರಾಮಯ್ಯ ಬೇರೆ ಪಕ್ಷದವರು. ರಾಜಕೀಯವಾಗಿ ಎದುರಾಳಿಗಳು, ಆದರೆ, ವೈಯುಕ್ತಿಕವಾಗಿ ಇಂತಹ ವಿಚಾರದಲ್ಲಿ ದ್ವೇಷಮಾಡಿದರೆ ನಾವು ಮನುಷ್ಯರಾಗುವುದಿಲ್ಲ. ಖುದ್ದಾಗಿ ತಾವು ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸುತ್ತೇನೆ ಎಂದು ತಿಳಿಸಿದರು.
Advertisement