ಇತ್ತ ಬಜೆಟ್ ಅಧಿವೇಶನ, ಅತ್ತ ಇಡಿ ಕೋರ್ಟ್ ನಿಂದ ವಿಚಾರಣೆಗೆ ಬುಲಾವ್; ಇಕ್ಕಟ್ಟಿನಲ್ಲಿ ಸಚಿವ ಡಿಕೆ ಶಿವಕುಮಾರ್
ಬೆಂಗಳೂರು: ಬುಧವಾರ ರಾಜ್ಯ ವಿಧಾನ ಮಂಡಲದ ಬಜೆಟ್ ಅಧಿವೇಶನ ಆರಂಭವಾಗುತ್ತಿದ್ದು, ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟ ಸರ್ಕಾರ ಉಳಿಸಲು ಶಾಸಕರ ನಂಬರ್ ಗೇಮ್ ನಲ್ಲಿ ತೊಡಗಿದ್ದರೆ ಇತ್ತ ಜಲಸಂಪನ್ಮೂಲ ಸಚಿವ ಡಿ ಕೆ ಶಿವಕುಮಾರ್ ತೆರಿಗೆ ಇಲಾಖೆಯ ವಿಚಾರಣೆಗೆ ಸಂಬಂಧಪಟ್ಟಂತೆ ದೆಹಲಿಯ ಜಾರಿ ನಿರ್ದೇಶನಾಲಯ ಕೋರ್ಟ್ ನಿಂದ ವಿಚಾರಣೆಗೆ ಬುಲಾವ್ ಬಂದಿದೆ.
ಕಾಂಗ್ರೆಸ್ ನಲ್ಲಿ ಏನೇ ತೊಂದರೆ ಬಂದರೂ ಬಗೆಹರಿಸಲು ಮುಂದಾಗುವ ಡಿ ಕೆ ಶಿವಕುಮಾರ್ ಈ ಬಾರಿ ಕೋರ್ಟ್ ವಿಚಾರಣೆಗೆ ಕಡ್ಡಾಯವಾಗಿ ಹಾಜರಾಗಬೇಕಿರುವುದರಿಂದ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ನಾಡಿದ್ದು ಶುಕ್ರವಾರ ಮಂಡಿಸುತ್ತಿರುವ ಬಜೆಟ್ ನಲ್ಲಿ ಭಾಗವಹಿಸುವುದು ಸಂಶಯವಾಗಿದೆ.
ಕಳೆದ ಮೇ ತಿಂಗಳಲ್ಲಿ ಬಿ ಎಸ್ ಯಡಿಯೂರಪ್ಪನವರು ಸದನದಲ್ಲಿ ಬಹುಮತ ಸಾಬೀತುಪಡಿಸಬೇಕಾಗಿದ್ದ ಸಂದರ್ಭದಲ್ಲಿ ಶಿವಕುಮಾರ್ ಅವರೇ ಅಂದು ಬಂಡಾಯ ಶಾಸಕರಾದ ಆನಂದ್ ಸಿಂಗ್, ಪ್ರತಾಪ್ ಗೌಡ ಪಾಟೀಲ್ ಮೊದಲಾದವರನ್ನು ಕಾಂಗ್ರೆಸ್ ನಿಂದ ಸದನಕ್ಕೆ ಕರೆಸಿಕೊಳ್ಳುವಲ್ಲಿ ಬಹುಮುಖ್ಯ ಪಾತ್ರ ವಹಿಸಿದ್ದರು.
ಬಜೆಟ್ ಅಧಿವೇಶನ ಆರಂಭವಾಗಿದೆ ಎಂದು ಡಿ ಕೆ ಶಿವಕುಮಾರ್ ಜಾರಿ ನಿರ್ದೇಶನಾಲಯದಿಂದ ವಿನಾಯ್ತಿ ಪಡೆಯುವ ಸಾಧ್ಯತೆ ಇದೆ. ಮೈತ್ರಿ ಸರ್ಕಾರದ ಸಚಿವರಾಗಿ ಅವರು ಸದನದಲ್ಲಿ ಇರಬೇಕಾಗುತ್ತದೆ ಎನ್ನುತ್ತಾರೆ ಡಿಕೆಶಿಯವರ ಆಪ್ತರೊಬ್ಬರು.
ಅಕ್ರಮ ಆಸ್ತಿ ಪ್ರಕರಣದಲ್ಲಿ ಶಿವಕುಮಾರ್ ವಿರುದ್ಧ ಆರೋಪಪಟ್ಟಿ ಸಲ್ಲಿಸಲಾಗಿದೆ. ಇತ್ತ ಹಲ್ಲೆಯಿಂದ ಗಾಯಗೊಂಡು ಆಸ್ಪತ್ರೆಯಲ್ಲಿರುವ ಶಾಸಕ ಆನಂದ್ ಸಿಂಗ್ ಮತ್ತು ಕಂಪ್ಲಿ ಗಣೇಶ್ ಸದನಕ್ಕೆ ಗೈರಾಗುವ ಸಾಧ್ಯತೆ ಹೆಚ್ಚಿದೆ. ಮತ್ತಿಬ್ಬರು ಬಂಡಾಯ ಶಾಸಕರು ಕೂಡ ಸದನದ ಅಧಿವೇಶನದಲ್ಲಿ ಭಾಗವಹಿಸುವುದು ಸಂಶಯವಾಗಿದೆ. ಇದರಿಂದ ಮೈತ್ರಿ ಸರ್ಕಾರದ ಶಾಸಕರ ಸಂಖ್ಯೆ 112ಕ್ಕೆ ಇಳಿದಿದೆ. ಶಿವಕುಮಾರ್ ಅವರು ಸಹ ಗೈರಾದರೆ ಶಾಸಕರ ಸಂಖ್ಯೆ 111ಕ್ಕೆ ಇಳಿಯಲಿದೆ. ವಿರೋಧಪಕ್ಷ ಬಿಜೆಪಿಯ ಶಾಸಕರ ಸಂಖ್ಯೆ 106 ಇದೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ