ಬೆಂಗಳೂರು: ವಿಧಾನ ಪರಿಷತ್ ನಾಮನಿರ್ದೇಶಿತ ಸದಸ್ಯ ಸ್ಥಾನಕ್ಕೆ ಜೆಡಿಎಸ್ ನಿವೃತ್ತ ಕೆಎಎಸ್ ಅಧಿಕಾರಿ ತಿಪ್ಪೇಸ್ವಾಮಿ ಅವರನ್ನು ಶುಕ್ರವಾರ ನೇಮಕ ಮಾಡಿದೆ.
ತಿಪ್ಪೇಸ್ವಾಮಿ ಅವರು, ದೋಸ್ತಿ ಸರ್ಕಾರದಲ್ಲಿ ಪ್ರಭಾವಿಯಾಗಿರುವ ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಅವರ ವಿಶೇಷಾಧಿಕಾರಿಯಾಗಿದ್ದು, ಅವರನ್ನು ಮೇಲ್ಮನೆಗೆ ಕಳಿಸುವಂತೆ ರೇವಣ್ಣ, ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಮೇಲೆ ತೀವ್ರ ಒತ್ತಡ ತಂದಿದ್ದರು.
ಮೂಲತಃ ಹಾಸನದವರಾದ ತಿಪ್ಪೇಸ್ವಾಮಿ, ಹೆಚ್.ಡಿ. ದೇವೇಗೌಡ ಪ್ರಧಾನಿಯಾಗಿದ್ದಂತಹ ಸಂದರ್ಭದಲ್ಲಿ ಅವರ ಆಪ್ತ ಕಾರ್ಯದರ್ಶಿಯಾಗಿದ್ದರು.
ಕೆಲವು ದಿನಗಳ ಹಿಂದೆ ತಿಪ್ಪೇಸ್ವಾಮಿ ಅವರ ಹೆಸರನ್ನು ಶಿಫಾರಸು ಮಾಡಿ ರಾಜ್ಯಪಾಲ ವಿ.ಆರ್.ವಾಲಾ ಅವರಿಗೆ ಕಳುಹಿಸಿಕೊಡಲಾಗಿತ್ತು.
ವಿಧಾನಪರಿಷತ್ತಿನ ನಾಮನಿರ್ದೇಶಿತ ಸದಸ್ಯರಾಗಿ ಜೆಡಿಎಸ್ನಿಂದ ತಿಪ್ಪೇಸ್ವಾಮಿ ಅವರನ್ನು ನೇಮಕ ಮಾಡಲು ಶಿಫಾರಸು ಮಾಡಿರುವುದಾಗಿ ಮುಖ್ಯಮಂತ್ರಿ ಕುಮಾರಸ್ವಾಮಿ ಇಂದು ಸ್ಪಷ್ಟಪಡಿಸಿದ್ದಾರೆ.