ಸೌಮ್ಯಾ ರೆಡ್ಡಿ ಮನವೊಲಿಸಿದ ಸೋನಿಯಾ ಗಾಂಧಿ, ಇಂದು ಸಿಎಲ್ ಪಿ ಸಭೆಗೆ ಹಾಜರು

ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಸೂಚನೆ ನೀಡಿದ್ದ ಜಯನಗರ ಶಾಸಕಿ ಹಾಗೂ ಹಿರಿಯ ಕಾಂಗ್ರೆಸ್ ನಾಯಕ ರಾಮಲಿಂಗಾ ರೆಡ್ದಿ ಅವರ ಪತ್ರಿ ಸೌಮ್ಯಾ ರೆಡ್ಡಿ...
ಸೋನಿಯಾ ಗಾಂಧಿ - ಸೌಮ್ಯ ರೆಡ್ಡಿ
ಸೋನಿಯಾ ಗಾಂಧಿ - ಸೌಮ್ಯ ರೆಡ್ಡಿ
ನವದೆಹಲಿ: ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಸೂಚನೆ ನೀಡಿದ್ದ ಜಯನಗರ ಶಾಸಕಿ ಹಾಗೂ ಹಿರಿಯ ಕಾಂಗ್ರೆಸ್ ನಾಯಕ ರಾಮಲಿಂಗಾ ರೆಡ್ದಿ ಅವರ ಪತ್ರಿ ಸೌಮ್ಯಾ ರೆಡ್ಡಿ ಅವರು ಸೋಮವಾರ ದೆಹಲಿಯಲ್ಲಿ ಕಾಂಗ್ರೆಸ್‌ ಅಧಿನಾಯಕ ನಾಯಕಿ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಿ ಮಹತ್ವದ ಮಾತುಕತೆ ನಡೆಸಿದರು.
ರಾಜ್ಯದ ಮೈತ್ರಿ ಸರ್ಕಾರ ಪತನದ ಅಂಚಿನತ್ತ ಸಾಗುತ್ತಿದ್ದು, ಸರ್ಕಾರ ಉಳಿಸಿಕೊಳ್ಳಲು ಕಾಂಗ್ರೆಸ್-ಜೆಡಿಎಸ್ ನಾಯಕರು ಹರಸಾಹಸ ಪಡುತ್ತಿದ್ದಾರೆ. 
ಈ ಎಲ್ಲಾ ಬೆಳವಣಿಗೆಗಳ ಮಧ್ಯೆಯೂ ಸೌಮ್ಯರೆಡ್ಡಿ ಅವರು ಸೋನಿಯಾ ಗಾಂಧಿ ಭೇಟಿ ಮಾಡಿದ್ದು, ತೀವ್ರ ಕುತೂಹಲ ಮೂಡಿಸಿದೆ. 
ಸೋನಿಯಾ ಗಾಂಧಿ ಅವರು ತಮ್ಮನ್ನು ಭೇಟಿ ಮಾಡಿದ ಸೌಮ್ಯಾ ರೆ‍ಡಿ ಅವರ ಮನವೊಲಿಸಿ, ಪಕ್ಷದಲ್ಲಿ ಉಳಿಸಿಕೊಳ್ಳುವಲ್ಲಿ ಯಸ್ವಿಯಾಗಿದ್ದು, ರಾಜೀನಾಮೆ ನಿರ್ಧಾರದಿಂದ ಹಿಂದೆ ಸರಿಯುವ ಸಾಧ್ಯತೆ ಇದೆ ಎನ್ನಲಾಗಿದೆ.
ಸುಮಾರು 15 ನಿಮಿಷಗಳ ಕಾಲ ನಡೆದ ಮಾತುಕತೆಯಲ್ಲಿ ಸೋನಿಯಾ ಗಾಂಧಿ ಅವರು, ಪಕ್ಷನಿಷ್ಠೆಗೆ ಕಾಂಗ್ರೆಸ್​ನಲ್ಲಿ ಬೆಲೆ ಇದೆ. ಮುಂದೆ ಎಲ್ಲರಿಗೂ ಒಳ್ಳೆಯ ಭವಿಷ್ಯ ಇದೆ ಎಂದು ಅಭಯ ನೀಡಿದ್ದಾರೆ.
ಇದೇ ವೇಳೆ, ಸೌಮ್ಯಾ ರೆಡ್ಡಿ ಅವರು ತಮ್ಮ ತಂದೆ ರಾಮಲಿಂಗಾ ರೆಡ್ಡಿ ಅವರ ಪರವಾಗಿ ಲಾಬಿ ಕೂಡ ನಡೆಸಿದ್ದಾರೆ. ತಮ್ಮ ತಂದೆಗೆ ಆಗಿರುವ ಅನ್ಯಾಯದ ಬಗ್ಗೆ ವಿವರ ನೀಡಿದ್ದಾರೆ. ಇದಕ್ಕೂ ಕೂಡ ಸೋನಿಯಾ ಗಾಂಧಿ ಸಕಾರಾತ್ಮಕವಾಗಿ ಸ್ಪಂದಿಸಿದರೆಂಬ ಮಾಹಿತಿ ಲಭ್ಯವಾಗಿದೆ.
ಸೋನಿಯಾ ಗಾಂಧಿ ಮಾತಿಗೆ ತೃಪ್ತಿಪಟ್ಟ ಸೌಮ್ಯಾ ರೆಡ್ಡಿ ಅವರು ಕಾಂಗ್ರೆಸ್ ತ್ಯಜಿಸದಿರಲು ನಿರ್ಧರಿಸಿದ್ದಾರೆನ್ನಲಾಗಿದೆ. ಅಲ್ಲದೆ ಇಂದು ಬೆಂಗಳೂರಿನಲ್ಲಿ ನಡೆಯಲಿರುವ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲೂ ಅವರು ಪಾಲ್ಗೊಳ್ಳಲಿದ್ಧಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com