ಬೆಂಗಳೂರು: ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಹೊಸಕೋಟೆ ಶಾಸಕ ಎಂಟಿಬಿ ನಾಗರಾಜ್ ಅವರ ಮನೆಗೆ ಕಾಂಗ್ರೆಸ್ನ ಘಟಾನುಘಟಿ ನಾಯಕರು ಮುಂಜಾನೆಯಿಂದ ಮನವೊಲಿಕೆಗೆ ಯತ್ನಿಸಿದ್ದರು. ಯಾರಿಗೂ ಬಗ್ಗದ ಎಂಟಿಬಿ ಕೊನೆಗೆ ಸಿದ್ದರಾಮಯ್ಯ ಮುಂದೆ ಮಂಡಿಯೂರಿದ್ದಾರೆ ಎನ್ನಲಾಗಿದೆ.
ಡಿಕೆ ಶಿವಕುಮಾರ್ ಅವರು ಹಲವು ಗಂಟೆಗಳು ನಿರಂತರ ಪ್ರಯತ್ನ ಮಾಡಿ ಎಂಟಿಬಿ ನಾಗರಾಜ್ ಮನವೊಲಿಸಲು ಮುಂದಾಗಿದ್ದರು. ಈ ವೇಳೆಗ ಎಂಟಿಬಿ ಬಗ್ಗದಿದ್ದರಿಂದ ಕೊನೆಗೆ ಸಿದ್ದರಾಮಯ್ಯ ಮನೆಗೆ ಕರೆದುಕೊಂಡು ಹೋಗಲಾಯಿತು. ಅಲ್ಲಿ ಸುಮಾರು 4 ಗಂಟೆಗಳ ಸುದೀರ್ಘ ಚರ್ಚೆ ಬಳಿಕ ಎಂಟಿಬಿ ಹಲವು ಷರತ್ತುಗಳೊಂದಿಗೆ ತಣ್ಣಗಾಗಿದ್ದಾರೆ ಎನ್ನಲಾಗಿದೆ.
ರಾಜೀನಾಮೆ ಹಿಂಪಡೆಯಲು ಸಮಯಾವಕಾಶ ಕೇಳಿರುವುದಾಗಿ ಹೇಳುವ ಮೂಲಕ ಪಕ್ಷದಲ್ಲೇ ಇರುವ ಸೂಚನೆ ನೀಡಿರುವ ಎಂಟಿಬಿ ನಾಗರಾಜ್, ಸಂಧಾನದ ನಂತರ ಉಪ ಮುಖ್ಯಮಂತ್ರಿ ಪರಮೇಶ್ವರ್, ಸಚಿವ ಡಿ.ಕೆ ಶಿವಕುಮಾರ್ ಜೊತೆಗೆ ಸಿದ್ದರಾಮಯ್ಯ ನಿವಾಸಕ್ಕೆ ಆಗಮಿಸಿ ಮಾತುಕತೆ ನಡೆಸಿದರು.
ಸಿದ್ದರಾಮಯ್ಯ ನಿವಾಸ ಕಾವೇರಿಯಲ್ಲಿಂದು ಭೇಟಿಯಾದ ಎಂಟಿಬಿ ನಾಗರಾಜ್, ಸಿದ್ದರಾಮಯ್ಯ ಅವರ ಮುಂದೆ ಕೆಲ ಷರತ್ತುಗಳನ್ನು ಇಟ್ಟಿದ್ದಾರೆ ಎಂಬುದು ತಿಳಿದುಬಂದಿದೆ. ಎಲ್ಲಾ ಷರತ್ತುಗಳಿಗೆ ಸಿದ್ದರಾಮಯ್ಯ ಒಪ್ಪಿದ್ದು, ಕಾಂಗ್ರೆಸ್ ನಲ್ಲಿಯೇ ಉಳಿಯುವುದಾಗಿ ಎಂಟಿಬಿ ನಾಗರಾಜ್ ಮಾತು ಕೊಟ್ಟಿದ್ದಾರೆ ಎನ್ನಲಾಗಿದೆ.
ಚರ್ಚೆ ವೇಳೆಯಲ್ಲಿ ನನ್ನ ಎದೆ ಬಗೆದರೆ ಸಿದ್ದರಾಮಯ್ಯ ಅವರೇ ಇದ್ದಾರೆ. ರಾಜೀನಾಮೆ ನೀಡಿರುವ ಮತ್ತೋರ್ವ ಶಾಸಕ ಡಾ. ಸುಧಾಕರ್ ಅವರು ರಾಜೀನಾಮೆ ಹಿಂಪಡೆಯುವಂತೆ ಮನವೊಲಿಸುತ್ತೇನೆ ಎಂದು ಎಂಟಿಬಿ ನಾಗರಾಜ್ ಹೇಳಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.