ನವದೆಹಲಿ: ಎಚ್ಡಿ ಕುಮಾರಸ್ವಾಮಿ ಅವರು ಕರ್ನಾಟಕ ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚಿಸಿ ಸೋಲುಂಡು ಅಧಿಕಾರದಿಂದ ಕೆಳಗಿಳಿದ ನಂತರ ರಾಜ್ಯದ ಇಬ್ಬರು ಪಕ್ಷೇತರ ಶಾಸಕರಿಗೆ ತಮ್ಮ ಅರ್ಜಿಯನ್ನು ಹಿಂಪಡೆಯಲು ಸುಪ್ರೀಂ ಕೋರ್ಟ್ ಅವಕಾಶ ಕಲ್ಪಿಸಿದೆ.
ಪಕ್ಷೇತರರಾದ ಮುಳಬಾಗಿಲಿನ ಎಚ್. ನಾಗೇಶ್ ಹಾಗೂ ರಾಣಿಬೆನ್ನೂರಿನ ಆರ್. ಶಂಕರ್ ತಮ್ಮ ಅರ್ಜಿಯನ್ನು ಹಿಂಪಡೆಯಲು ಕೋರ್ಟ್ ಅನುಮತಿಸಿದೆ.
ಇದಕ್ಕೆ ಮುನ್ನ ವಾದ ಮಂಡಿಸಿದ ಸ್ಪೀಕರ್ ಪರ ವಕೀಲರಾದ ಅಭಿಷೇಕ್ ಮನು ಸಿಂಘ್ವಿ ಪಕ್ಷೇತರರು ತಮ್ಮ ಅರ್ಜಿ ಹಿಂಪಡೆಯುವುದಾದರೆ ತಮ್ಮ ಅಭ್ಯಂತರವಿಲ್ಲ ಎಂದು ಕೋರ್ಟ್ ಗೆ ಹೇಳಿದ್ದರು.
ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್ ಅವರ ನೇತೃತ್ವದ ಪೀಠ ಅರ್ಜಿ ವಿಚಾರಣೆ ನಡೆಸಿದೆ.