ನಾನು ಮತ್ತು ಪರಮೇಶ್ವರ್ ಸಮ್ಮಿಶ್ರ ಸರ್ಕಾರದ ಹಕ್ಕ ಬುಕ್ಕರು: ಎಚ್.ಡಿ ಕುಮಾರಸ್ವಾಮಿ

ಸಮ್ಮಿಶ್ರ ಸರ್ಕಾರದಲ್ಲಿ ತಾವು ಮತ್ತು ಪರಮೇಶ್ವರ್ ಹಕ್ಕಬಕ್ಕುರು.ವಿಜಯನಗರ ಸಾಮ್ರಾಜ್ಯವನ್ನು ಆಗಿನ ಹಕ್ಕಬುಕ್ಕರು ಕಟ್ಟಿದ್ದರು...
ಕುಮಾರಸ್ವಾಮಿ ಮತ್ತು ಪರಮೇಶ್ವರ್
ಕುಮಾರಸ್ವಾಮಿ ಮತ್ತು ಪರಮೇಶ್ವರ್
ಬೆಂಗಳೂರು: ಸಮ್ಮಿಶ್ರ ಸರ್ಕಾರದಲ್ಲಿ ತಾವು ಮತ್ತು ಪರಮೇಶ್ವರ್ ಹಕ್ಕಬಕ್ಕುರು.ವಿಜಯನಗರ ಸಾಮ್ರಾಜ್ಯವನ್ನು ಆಗಿನ ಹಕ್ಕಬುಕ್ಕರು ಕಟ್ಟಿದ್ದರು. ಈಗ ಬೆಂಗಳೂರು ನಗರಾಭಿವೃದ್ಧಿ ಸೇರಿದಂತೆ ರಾಜ್ಯದ ಅಭಿವೃದ್ಧಿಗೆ ತಾವು ಮತ್ತು ಪರಮೇಶ್ವರ್ ಕೆಲಸ ಮಾಡುತ್ತಿದ್ದೇವೆ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿದರು.
ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಬ್ಯಾಟರಾಯನಪುರ ವಿಧಾನಸಭಾ ವ್ಯಾಪ್ತಿಯ ಕುದುರೆಗೆರೆ ಗ್ರಾಮದಲ್ಲಿ‌ನಡೆದ ವಸತಿ ಇಲಾಖೆ ರಾಜೀವ ಗಾಂಧಿ ವಸತಿ ನಿಗಮ ನಿಯಮಿತ ವತಿಯಿಂದ ನಡೆದ 'ಮುಖ್ಯಮಂತ್ರಿಗಳ 1 ಲಕ್ಷ ಬಹುಮಹಡಿ ಬೆಂಗಳೂರು ವಸತಿ ಯೋಜನೆಯ 'ಭೂಮಿಪೂಜೆ’ ನೆರವೇರಿಸಿ ಅವರು ಮಾತನಾಡಿದರು.
ಬಡವರಿಗೆ ಒಳ್ಳೆಯ ಮನೆಗಳನ್ನು ನಿರ್ಮಿಸಿಕೊಡುವುದು ಸರ್ಕಾರದ ಜವಾಬ್ದಾರಿ. ಬಡವರಿಗೆ ಮನೆ ಕೊಡುವುದು ತಮ್ಮ ಮತ್ತು ಪರಮೇಶ್ವರ್ ಉದ್ದೇಶವಾಗಿದೆ ಎಂದರು. 2 ಲಕ್ಷ ಮನೆ ನಿರ್ಮಿಸಲಾಗುತ್ತಿದ್ದು,‌ ಮೊದಲನೇ ಹಂತದಲ್ಲಿ ಐವತ್ತು ಸಾವಿರ ಮನೆಗಳನ್ನು ನಿರ್ಮಿಸಲಾಗಿದೆ.‌ ಮೈತ್ರಿ ಸರ್ಕಾರದಲ್ಲಿ ಬೆಂಗಳೂರು ನಗರ ಅಭಿವೃದ್ಧಿಗೆ ಒಂದು ಲಕ್ಷ ಕೋಟು ರೂ. ನೀಡಿಕೆ, 9 ತಿಂಗಳಲ್ಲಿ 14 ಲಕ್ಷ ರೈತ ಕುಟುಂಬಗಳಿಗೆ  ಸಾಲಮನ್ನಾ ಮಾಡಲಾಗಿದೆ ಎಂದ ಅವರು, ಪ್ರಧಾನಿ ಮೋದಿ ಹುಸಿ ನುಡಿಯುತ್ತಿದ್ದು, ನರೇಂದ್ರ ಮೋದಿಯವರ ಕಾರ್ಯಕ್ರಮ‌ ಬೆನ್ನಿಗೆ ಚೂರಿ‌ಹಾಕುವ ಸುಳ್ಳಿನ ಕಂತೆ ಎಂದು ಅವರು ಟೀಕಿಸಿದರು.
ರಾಜ್ಯ 2.8 ಲಕ್ಷ ರೈತರನ್ನು ಪ್ರಧಾನಿಯವರ ಕಿಸಾನ್ ಸಮ್ಮಾನ್ ಯೋಜನೆಗೆ ಸೇರಿಸಲಾಗಿದೆ. ಆದರೆ ಈ ಪೈಕಿ ಕೇವಲ 17 ರೈತರನ್ನು ಆಯ್ಕೆ ಮಾಡಿ, ಅವರಲ್ಲಿ ಕೇವಲ 6 ರೈತರ ಖಾತೆಗಳಿಗೆ 2 ಸಾವಿರ ರೂ. ಬದಲಿಗೆ ಕೇವಲ 900 ರೂ. ಜಮೆ ಮಾಡಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
“ನರೇಂದ್ರ ಮೋದಿ ಅಪ್ಪಟ ಸುಳ್ಳುಗಾರ. ನಮ್ಮ ಮನೆ ಬಾಗಿಲನ್ನು ಯಾವಾಗ ಬೇಕಾದರೂ ಬಡಿಯಬಹುದು. ಆದರೆ ನರೇಂದ್ರ ಮೋದಿ ಅವರ ಮನೆ ಬಾಗಿಲಿಗೆ ಹೋಗಲು ಸಾಧ್ಯವೇ ?” ಎಂದು ಪ್ರಶ್ನಿಸಿದರು‌.
ಸರ್ಕಾರದ ಕಟ್ಟಡಗಳು ಕಳಪೆಯಾಗಿರುತ್ತವೆ ಎನ್ನುವ ಭಾವನೆ ತೊಲಗಿಸಿ, ಉತ್ತಮ ಕಟ್ಟಡಗಳನ್ನು ನಿರ್ಮಿಸಲಾಗಿದೆ.‌ಬೀದಿ ವ್ಯಾಪಾರಿಗಳಿಗೆ, ಪೆಟ್ರೋಲ್ ಬಂಕ್ ಕೆಲಸಗಾರರಿಗೆ, ಆಟೋ ಡ್ರೈವರ್ ಸೇರಿದಂತೆ ನಿವೇಶನರಹಿತರಿಗೆ ಮನೆ ನೀಡಲಾಗುತ್ತಿದೆ ಎಂದು ಅವರು ವಿವರಿಸಿದರು.
ವಸತಿ ಇಲಾಖೆ ರಾಜೀವ್ ಗಾಂಧಿ ವಸತಿ ನಿಗಮ‌ ನಿಯಮಿತ ವತಿಯಿಂದ ಬೆಂಗಳೂರು ಉತ್ತರ ಕ್ಷೇತ್ರದ ಬ್ಯಾಟರಾಯನಪುರದಲ್ಲಿ ನಡೆದ 'ಮುಖ್ಯಮಂತ್ರಿಗಳ  1 ಲಕ್ಷ ಬಹುಮಹಡಿ ಬೆಂಗಳೂರು ವಸತಿ ಯೋಜನೆ' ಯ ಭೂಮಿಪೂಜೆ ಸಮಾರಂಭಕ್ಕೆ ರಿಮೋಟ್ ಗುಂಡಿ ಒತ್ತುವ ಮೂಲಕ ಲೋಕಾರ್ಪಣೆ ಮಾಡಲಾಯಿತು.
ಗ್ತಾಮೀಣಾಭಿವೃದ್ಧಿ ಸಚಿವ ಕೃಷ್ಣಭೈರೇಗೌಡ ಮಾತನಾಡಿ, ಸಮ್ಮಿಶ್ರ ಸರ್ಕಾರದಲ್ಲಿ ಸುಮಾರು 40 ಸಾವಿರ ಕೋಟಿ ರೂ ಸಾಲಮನ್ನಾ ಯೋಜನೆ ಮಾಡಿರುವ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳು ರಾಜ್ಯದಲ್ಲಿ ಅದ್ವಿತೀಯ ಸಾಧನೆ ಮಾಡಿದ್ದಾರೆ. ಎಂಟು ಸಾವಿರ ಕೋಟಿ ಅನುದಾನವನ್ನು ಬೆಂಗಳೂರ ನಗರಾಭಿವೃದ್ಧಿಗೆ ನೀಡಲಾಗಿದೆ. ಹದಿನೈದು ವರ್ಷಗಳಿಂದ ಬಾಕಿ ಇದ್ದ ಪೆರಿಫೆರಲ್ ರಿಂಗ್ ರೋಡಿಗೆ ಸರ್ಕಾರದಿಂದಲೇ 6 ಸಾವಿರ ಕೋಟಿ ರೂ ನೀಡಲಾಗಿದೆ. ಎರಡು ಮತ್ತು ಮೂರನೇ ಹಂತದ ಮೆಟ್ರೋ ಯೋಜನೆಗೂ ಚಾಲನೆ ನೀಡಲಾಗಿದೆ ಎಂದು ಸಾಧನೆಗಳ ಪಟ್ಟಿ ಬಿಚ್ಚಿಟ್ಟರು.
ಮೂರು ವರ್ಷಗಳ ತಯಾರಿ ನಡೆದಿದ್ದು, 45 ಸಾವಿರ ಫಲಾನುಭವಿಗಳಿಗೆ ಹಕ್ಕುಪತ್ರವನ್ನೂ ವಿತರಿಸಲಾಗಿದೆ. ಸಮ್ಮಿಶ್ರ ಸರ್ಕಾರದಲ್ಲಿ 14 ಮಹಡಿ ಲಿಫ್ಟ್ ಸೌಲಭ್ಯವುಳ್ಳ ಮನೆ‌ ನಿರ್ಮಿಸಲಾಗುತ್ತಿದೆ. ಸೂರು ರಹಿತರಿಗೆ ಕೈಗೆಟುಕುವ ಬೆಲೆಯಲ್ಲಿ ಸರ್ಕಾರದ ಸಹಾಯಧನದೊಂದಿಗೆ ಮನೆ ನೀಡಲಾಗುತ್ತಿದೆ. ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದಲ್ಲಿ ಯೋಜನೆಗೆ ಚಾಲನೆ ಸಿಕ್ಕಿರುವುದು ಸಂತಸ ತಂದಿದೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com