ಚಿಂಚೋಳಿ: ಸಂಸದ ಮಲ್ಲಿಕಾರ್ಜುನ ಖರ್ಗೆ ಮತ್ತು ಡಾ.ಉಮೇಶ್ ಜಾಧವ್ ಅವರ ನಡುವಿನ ವಾಕ್ಸಮರ ಚುನಾವಣೆ ಫಲಿತಾಂಶ ಬರುವವರೆಗೂ ನಿಲ್ಲುವಂತೆ ಕಾಣುತ್ತಿಲ್ಲ, ಲೋಕ ಸಮರದ ನಂತರ ಇಬ್ಬರು ನಾಯಕರುಗಳು ಚಿಂಚೋಳಿ ವಿಧಾನಸಭೆ ಉಪ ಚುನಾವಣೆಯಲ್ಲಿ ಮತ್ತು ವಾಗ್ಯುದ್ಧ ಮುಂದುವರಿಸಿದ್ದಾರೆ.
ಚಿಂಚೋಳಿ ಶಾಸಕರಾಗಿದ್ದ ಉಮೇಶ್ ಜಾಝವ್, ಕಾಂಗ್ರೆಸ್ ಪಕ್ಷ ತೊರೆದು ಕಲಬುರಗಿ ಲೋಕಸಭೆ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ನಿಂದ ಸ್ಪರ್ಧಿಸಿದ್ದರು. ತೆರವಾಗಿರುವ ಚಿಂಚೋಳಿ ಕ್ಷೇತ್ರದ ವಿಧಾನಸಭೆ ಉಪ ಚುನಾವಣೆಯಲ್ಲಿ ತಮ್ಮ ಪುತ್ರ ಅವಿನಾಶ್ ಜಾಧವ್ ನನ್ನು ಕಣಕ್ಕಿಳಿಸಿದ್ದಾರೆ.
ಚಿಂಚೋಳಿ ವಿಧಾನವಭೆ ಕ್ಷೇತ್ರ ಕಲಬುರಗಿ ಲೋಕಸಭೆ ವ್ಯಾಪ್ತಿಯಲ್ಲಿ ಬರುತ್ತದೆ. ಇದು ಮಲ್ಲಿಕಾರ್ಜುನ ಖರ್ಗೆ ಮತ್ತು ಪುತ್ರ ಪ್ರಿಯಾಂಕ್ ಗೆ ಪ್ರತಿಷ್ಠೆಯ ವಿಷಯವಾಗಿದೆ.
ಉಮೇಶ್ ಜಾಧವ್ ಪುತ್ರ ಅವಿನಾಶ್ ಅವರನ್ನು ಸುಲಭವಾಗಿ ಸೋಲಿಸಬಹುದು ಎಂದು ಖರ್ಗೆ ಭಾವಿಸಿದ್ದಾರೆ.ಜಾಧವ್ ಪುತ್ರನನ್ನು ಸೋಲಿಸುವ ಉದ್ದೇಶದಿಂದಾಗಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಮಾಜಿ ಸಿಎಂ ಸಿದ್ದರಾಮಯ್ಯಸೇರಿದಂತೆ ಹಲವು ಕಾಂಗ್ರೆಸ್ ಮುಖಂಡರು ಪ್ರಚಾರದಲ್ಲಿ ಭಾಗವಹಿಸಲಿದ್ದಾರೆ.
ಐದು ವರ್ಷ ಜನರ ಸೇವೆ ಮಾಡಲಿದ್ದಾರೆ ಎಂಬ ವಿಶ್ವಾಸದಿಂದ ಜನ ಉಮೇಶ್ ಜಾಧವ್ ಗೆ ಮತ ಹಾಕಿದ್ದರು ಆದರೆ ಆ ಜನರಿಗೆ ಜಾಧವ್ ಮೋಸ ಮಾಡಿದ್ದಾರೆ ಎಂದು ಪ್ರಿಯಾಂಕ್ ಖರ್ಗೆ ಆರೋಪಿಸಿದ್ದಾರೆ,ಚಿಂಚೋಳಿಯಲ್ಲಿ ಪ್ರವಾಸ ಕೈಗೊಂಡಿರುವ ಪ್ರಿಯಾಂಕ್ ಖರ್ಗೆ, ಸುಭಾಷ್ ರಾಥೋಡ್ ಗೆ ಮತ ಹಾಕುವಂತೆ ಮನವೊಲಿಸುತ್ತಿದ್ದಾರೆ.